ಬೆಂಗಳೂರು: ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ನ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 43ರಷ್ಟು ಹೆಚ್ಚಾಗಿ ₹3,606 ಕೋಟಿಗೆ ಏರಿಕೆ ಕಂಡಿದೆ.
ಬಡ್ಡಿ ವರಮಾನ ಹೆಚ್ಚಾಗಿರುವುದು ಮತ್ತು ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತವು ಕಡಿಮೆ ಆಗಿರುವ ಕಾರಣಗಳಿಂದಾಗಿ ಲಾಭದಲ್ಲಿ ಈ ಪ್ರಮಾಣದ ಏರಿಕೆ ಕಂಡುಬಂದಿದೆ ಎಂದು ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಕೆ. ಸತ್ಯನಾರಾಯಣ ರಾಜು ಅವರು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದರು.
ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭವು ₹2,525 ಕೋಟಿಯಷ್ಟು ಆಗಿತ್ತು. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ನಿವ್ವಳ ಬಡ್ಡಿ ವರಮಾನ ಶೇ 19.76ರಷ್ಟು ಹೆಚ್ಚಾಗಿ ₹8,903 ಕೋಟಿಗೆ ತಲುಪಿದೆ. ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತವು ₹3,637 ಕೋಟಿಯಿಂದ ₹2,608 ಕೋಟಿಗೆ ಇಳಿಕೆ ಕಂಡಿದೆ ಎಂದು ಅವರು ತಿಳಿಸಿದರು.
ವಸೂಲಾಗದ ಸಾಲದ ಸರಾಸರಿ ಪ್ರಮಾಣವು (ಜಿಎನ್ಪಿಎ) ಶೇ 6.37 ರಿಂದ ಶೇ 4.76ಕ್ಕೆ ಇಳಿಕೆ ಕಂಡಿದೆ. ನಿವ್ವಳ ಎನ್ಪಿಎ ಶೇ 2.19 ರಿಂದ ಶೇ 1.41ಕ್ಕೆ ಇಳಿಕೆ ಆಗಿದೆ ಎಂದು ಬ್ಯಾಂಕ್ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.