ನವದೆಹಲಿ: ತೊಗರಿ ಬೇಳೆ ಬೆಲೆಯು ಹೆಚ್ಚಾಗುತ್ತಿರುವ ಕಾರಣ, ದಾಸ್ತಾನುಗಾರರು ಮತ್ತು ವರ್ತಕರ ಬಳಿ ಇರುವ ತೊಗರಿಬೇಳೆ ಸಂಗ್ರಹದ ಮಾಹಿತಿ ಬಹಿರಂಗಪಡಿಸುವಂತೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರವು ಸೂಚನೆ ನೀಡಿದೆ.
ಕೃತಕ ಅಭಾವ ಸೃಷ್ಟಿಸುವ ಉದ್ದೇಶದಿಂದ ತೊಗರಿ ಬೇಳೆ ಮಾರಾಟವನ್ನು ಮಿತಿಗೊಳಿಸಲಾಗುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರವು ಈ ಸೂಚನೆ ನೀಡಿದೆ. ಕೇಂದ್ರವು ಧಾನ್ಯಗಳ ಬೆಲೆಯ ಮೇಲೆ ನಿಗಾ ಇರಿಸಿದೆ.
ದಾಸ್ತಾನಿನ ಮೇಲೆ ನಿಗಾ ಇಡುವುದು ಹಾಗೂ ಅದನ್ನು ತಾಳೆ ನೋಡುವ ಕೆಲಸವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಗಬೇಕು ಎಂದು ಕೂಡ ಕೇಂದ್ರ ಹೇಳಿದೆ.
ತೊಗರಿಬೇಳೆ ಬಿತ್ತನೆಯು ಕಡಿಮೆ ಆಗಿರುವ ಕಾರಣದಿಂದಾಗಿ ಜುಲೈ ಎರಡನೆಯ ವಾರದ ನಂತರದಲ್ಲಿ ಅದರ ಬೆಲೆಯ ಏರುಗತಿಯಲ್ಲಿ ಸಾಗಿದೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ತೊಗರಿಬೇಳೆ ಬೆಳೆಯುವ ಪ್ರದೇಶಗಳಲ್ಲಿ ಅತಿಯಾದ ಮಳೆಯ ಕಾರಣದಿಂದಾಗಿ ಬಿತ್ತನೆ ಕಡಿಮೆಯಾಗಿದೆ.
ಧಾನ್ಯಗಳ ಲಭ್ಯತೆಯು ದೇಶಿ ಮಾರುಕಟ್ಟೆಯಲ್ಲಿ ಸಾಕಷ್ಟಿದೆ. ಹೀಗಿದ್ದರೂ, ದಾಸ್ತಾನಿನಿಂದ 38 ಲಕ್ಷ ಟನ್ ಧಾನ್ಯಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಕೇಂದ್ರವು ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.