ನವದೆಹಲಿ: ರಾಜ್ಯದ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟಗಳನ್ನು ಬಗೆಹರಿಸಲು ಮುಂದಿನ ವರ್ಷದ ಬಜೆಟ್ನಲ್ಲಿ ಪರಿಹಾರ ಕೊಡುಗೆ ಘೋಷಿಸಬೇಕು ಎಂದು ಬೆಳೆಗಾರರ ಸಂಘಟನೆಗಳು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿವೆ.
ಕಾಫಿ ಬೆಳೆಯುವುದಕ್ಕೆ ಉತ್ತೇಜನ ನೀಡಲು ಅಲ್ಪಾವಧಿ ಮತ್ತು ದೀರ್ಘಾವಧಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಬೆಳೆಗಾರರ ಸಂಘಟನೆಗಳ ನಿಯೋಗವು ನಿರ್ಮಲಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿವೆ.
ಬೇಡಿಕೆಗಳು: ಪ್ರಕೃತಿ ವಿಕೋಪದಿಂದ ಸಾಲದ ಸುಳಿಗೆ ಸಿಲುಕಿರುವ ಕಾಫಿ ಬೆಳೆಗಾರರಿಗೆ ಸಮಗ್ರ ಸಾಲ ಪರಿಹಾರ ಕೊಡುಗೆ, ಬ್ಯಾಂಕ್ ಸಾಲ ಬಡ್ಡಿಗೆ ರಿಯಾಯ್ತಿ, ಅಗ್ಗದ ದರದಲ್ಲಿ ಸಾಲಗಳ ಪುನರ್ ಹೊಂದಾಣಿಕೆ, ಕಾಫಿಗೆ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ ವಿಸ್ತರಣೆ, ಜಂಟಿ ಕಾರ್ಯಪಡೆ ವರದಿ ಜಾರಿಗೆ ಕ್ರಮ, ರಸಗೊಬ್ಬರ ಮತ್ತು ಕೀಟನಾಶಕಗಳ ಮೇಲಿನ ಜಿಎಸ್ಟಿ ಕಡಿತ ಮತ್ತಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ನಿಯೋಗವು ಮನವಿ ಮಾಡಿಕೊಂಡಿದೆ.
ಕರ್ನಾಟಕ ಬೆಳೆಗಾರರ ಒಕ್ಕೂಟ (ಕೆಜಿಎಫ್), ಕರ್ನಾಟಕ ಪ್ಲ್ಯಾಂಟರ್ಸ್ ಅಸೋಸಿಯೇಷನ್ (ಕೆಪಿಎ) ಮತ್ತು ಕೊಡಗು ಪ್ಲ್ಯಾಂಟರ್ಸ್ ಅಸೋಸಿಯೇಷನ್ (ಸಿಪಿಎ) ಪದಾಧಿಕಾರಿಗಳು ನಿಯೋಗದಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.