ADVERTISEMENT

‘ಬೂಸ್ಟರ್‌ ಡೋಸ್‌: ಬ್ಯಾಂಕರ್‌ಗಳನ್ನು ಮುಂಚೂಣಿ ಕಾರ್ಯಕರ್ತರಾಗಿ ಪರಿಗಣಿಸಿ’

ಹಣಕಾಸು ಸಚಿವೆ ನಿರ್ಮಲಾಗೆ ಎಐಬಿಒಸಿ ಪತ್ರ

ಪಿಟಿಐ
Published 8 ಜನವರಿ 2022, 14:03 IST
Last Updated 8 ಜನವರಿ 2022, 14:03 IST

ನವದೆಹಲಿ: ದೇಶದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬೂಸ್ಟರ್ ಡೋಸ್‌ ನೀಡಲು ಬ್ಯಾಂಕರ್‌ಗಳನ್ನು ಮುಂಚೂಣಿ ಕಾರ್ಯಕರ್ತರೆಂದು ಪರಿಗಣಿಸುವಂತೆ ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಸಂಘವು (ಎಐಬಿಒಸಿ) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮನವಿ ಮಾಡಿದೆ.

ಈ ಕುರಿತು ಸಂಘಟನೆಯು ಸಚಿವೆಗೆ ಪತ್ರ ಬರೆದಿದ್ದು, ಶೇ 50ರಷ್ಟು ಸಿಬ್ಬಂದಿ ಕಚೇರಿ ಅಥವಾ ಶಾಖೆಗಳಲ್ಲಿ ಕೆಲಸ ಮಾಡುವಂತೆ ಇನ್ನುಳಿದ ಶೇ 50ರಷ್ಟು ಸಿಬ್ಬಂದಿ ಮನೆಯಿಂದಲೇ ಕೆಲಸ ನಿರ್ವಹಿಸಲು ಅವಕಾಶ ನೀಡುವಂತೆ ಕೇಳಿದೆ. ಅಗತ್ಯ ಸೇವಾ ವರ್ಗದ ಅಡಿಯಲ್ಲಿ ಉಪನಗರ ರೈಲ್ವೆ ಸೇರಿದಂತೆ ಸಾರ್ವಜನಿಕ ಸಾರಿಗೆಯನ್ನು ಪಡೆಯಲು ಬ್ಯಾಂಕರ್‌ಗಳಿಗೆ ವಿಶೇಷ ಸ್ಥಾನಮಾನ ನೀಡುವಂತೆಯೂ ಬೇಡಿಕೆ ಸಲ್ಲಿಸಿದೆ.

ಕೋವಿಡ್‌ನ ಮೊದಲ ಎರಡು ಅಲೆಗಳಿಂದಾಗಿ 2 ಸಾವಿರ ಬ್ಯಾಂಕರ್‌ಗಳು ತಮ್ಮ ಜೀವ ಕಳೆದುಕೊಂಡಿದ್ದಾರೆ. ಹೀಗಾಗಿ ಬ್ಯಾಂಕರ್‌ಗಳಿಗೆ ರ್‍ಯಾಪಿಡ್‌ ಆ್ಯಂಟಿಜನ್‌ ಟೆಸ್ಟ್‌ ಕಡ್ಡಾಯ ಆಗಬೇಕು ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸೌಮ್ಯ ದತ್ತ ಅವರು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.