ನವದೆಹಲಿ: ಭಾರತದ ಅರ್ಥವ್ಯವಸ್ಥೆಯ ಬೆಳವಣಿಗೆಯ ಅಂದಾಜು ದರವನ್ನು ತಾನು ಇನ್ನಷ್ಟು ತಗ್ಗಿಸಬೇಕಾಗಬಹುದು ಎಂದು ವಿಶ್ವಬ್ಯಾಂಕ್ ಬುಧವಾರ ಹೇಳಿದೆ. ಕೋವಿಡ್–19 ಸೃಷ್ಟಿಸಿರುವ ಬಿಕ್ಕಟ್ಟಿನಿಂದ ಭಾರತ ಇನ್ನಷ್ಟು ದೃಢವಾಗಿ ಹೊರಬರಲು ಕೌಶಲ, ಹಣಕಾಸು ಕ್ಷೇತ್ರ, ಆರೋಗ್ಯ, ಕಾರ್ಮಿಕ ವಲಯಗಳಲ್ಲಿ ಸುಧಾರಣೆ ಬೇಕು ಎಂದು ಅದು ಹೇಳಿದೆ. ಭೂಸುಧಾರಣೆಗಳೂ ಅಗತ್ಯ ಎನ್ನುವ ಮಾತನ್ನು ಕೂಡ ಆಡಿದೆ.
ಭಾರತದ ಅರ್ಥವ್ಯವಸ್ಥೆಯು 2020–21ನೇ ಆರ್ಥಿಕ ವರ್ಷದಲ್ಲಿ ಶೇಕಡ 3.2ರಷ್ಟು ಕುಗ್ಗಬಹುದು ಎಂದು ವಿಶ್ವಬ್ಯಾಂಕ್ ಮೇ ತಿಂಗಳಲ್ಲಿ ಅಂದಾಜಿಸಿತ್ತು. ‘ಈಚಿನ ಕೆಲವು ವಾರಗಳಲ್ಲಿ ಹೊಸ ಸವಾಲುಗಳು ಎದುರಾಗಿವೆ. ಇವು ತಕ್ಷಣಕ್ಕೆ ಒಂದಿಷ್ಟು ಪರಿಣಾಮ ಬೀರಬಹುದು. ವೈರಾಣು ಹರಡುವಿಕೆ ನಿಂತಿಲ್ಲದಿರುವುದು, ಹಣಕಾಸು ವಲಯದ ಮೇಲೆ ಇನ್ನಷ್ಟು ಒತ್ತಡ ಬೀಳುವ ಸಾಧ್ಯತೆಗಳು ಈ ಸವಾಲುಗಳ ಪೈಕಿ ಕೆಲವು’ ಎಂದು ಅದು ಹೇಳಿದೆ.
ಪರಿಷ್ಕೃತ ಮುನ್ನೋಟವು ಅಕ್ಟೋಬರ್ ತಿಂಗಳ ವೇಳೆಗೆ ಲಭ್ಯವಾಗಲಿದೆ. ಅದರಲ್ಲಿ, ಈ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಇನ್ನಷ್ಟು ಕುಸಿತ ಆಗುವ ಅಂದಾಜನ್ನು ನೀಡಬಹುದು ಎಂದು ವಿಶ್ವಬ್ಯಾಂಕ್ ತಿಳಿಸಿದೆ. 2021ನೇ ಸಾಲಿನಲ್ಲಿ ದೇಶದ ವಿತ್ತೀಯ ಕೊರತೆಯು ಶೇಕಡ 6.6ರಷ್ಟಕ್ಕೆ ಹೆಚ್ಚಳ ಆಗಬಹುದು, ಅದರ ನಂತರದ ವರ್ಷದಲ್ಲಿ ಇದು ಶೇ 5.5ರ ಮಟ್ಟದಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.