ನವದೆಹಲಿ: ಆರ್ಥಿಕ ನೀತಿಗಳಿಗೆ ಸಂಬಂಧಿಸಿದ ವಿಚಾರಗಳ ಪರಾಮರ್ಶೆಯಲ್ಲಿ ನ್ಯಾಯಾಂಗದ ವ್ಯಾಪ್ತಿ ಸೀಮಿತವಾಗಿದ್ದರೂ, ನ್ಯಾಯಾಲಯವು ಕೈಕಟ್ಟಿ ಕೂರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೆ, ಸರ್ಕಾರವು ತೀರ್ಮಾನವೊಂದನ್ನು ಯಾವ ಬಗೆಯಲ್ಲಿ ಕೈಗೊಂಡಿತ್ತು ಎಂಬುದನ್ನು ಯಾವುದೇ ಸಂದರ್ಭದಲ್ಲಿ ತಾನು ಪರಿಶೀಲಿಸಬಹುದು ಎಂದು ಹೇಳಿದೆ.
ಕೇಂದ್ರ ಸರ್ಕಾರವು 2016ರಲ್ಲಿ ಕೈಗೊಂಡ ನೋಟು ರದ್ದತಿ ತೀರ್ಮಾನ ಪ್ರಶ್ನಿಸಿ ಸಲ್ಲಿಕೆಯಾಗಿರುವ 58 ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ಎ. ನಜೀರ್ ನೇತೃತ್ವದ ಪೀಠವು ನಡೆಸುತ್ತಿದೆ.
‘ನೋಟು ರದ್ದತಿ ತೀರ್ಮಾನವು ಒಳ್ಳೆಯದೋ, ಕೆಟ್ಟದ್ದೋ ಎಂಬುದನ್ನು ಸರ್ಕಾರವೇ ತೀರ್ಮಾನಿಸಲಿ. ಆದರೆ ತೀರ್ಮಾನ ಕೈಗೊಳ್ಳುವಾಗ ಎಲ್ಲ ಪ್ರಕ್ರಿಯೆಗಳನ್ನು ಅನುಸರಿಸಲಾಗಿತ್ತೇ ಎಂಬುದನ್ನು ನಾವು ಪರಿಶೀಲಿಸಬಹುದು’ ಎಂದು ನ್ಯಾಯಪೀಠ ಹೇಳಿದೆ.
ನೋಟು ರದ್ದತಿ ಶಿಫಾರಸು ಮಾಡಿದ ಆರ್ಬಿಐ ಕೇಂದ್ರ ಮಂಡಳಿಯ ಸಭೆಯ ಕೋರಂ ವಿವರ ನೀಡುವಂತೆ ಕೋರ್ಟ್ ಸೂಚಿಸಿದೆ. 2016ರ ನವೆಂಬರ್ 8ರಂದು ನಡೆದ ಆರ್ಬಿಐ ನಿರ್ದೇಶಕರ ಸಭೆಯ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಪಿ. ಚಿದಂಬರಂ ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.