ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ನ ಮೀಸಲು ನಿಧಿಯ ಸೂಕ್ತ ಪ್ರಮಾಣ ನಿರ್ಧರಿಸಲು ನಿರ್ದೇಶಕ ಮಂಡಳಿ ರಚಿಸಲು ಉದ್ದೇಶಿಸಿರುವ ಪರಿಣತರ ಸಮಿತಿ ಶೀಘ್ರದಲ್ಲಿಯೇ ಅಸ್ತಿತ್ವಕ್ಕೆ ಬರಲಿದೆ.
ಸೋಮವಾರದ ಸಭೆಯಲ್ಲಿ ಸಮಿತಿ ರಚಿಸುವ ನಿರ್ಧಾರಕ್ಕೆ ಬರಲಾಗಿದೆ. ಸಮಿತಿಯು ಯಾವ ವಿಷಯಗಳ ಬಗ್ಗೆ ವರದಿ ನೀಡಬೇಕು ಮತ್ತು ಸಮಿತಿಗೆ ಯಾರನ್ನು ನೇಮಕ ಮಾಡಬೇಕು ಎನ್ನುವುದನ್ನು ಕೇಂದ್ರ ಸರ್ಕಾರ ಮತ್ತು ಆರ್ಬಿಐ ಜಂಟಿಯಾಗಿಯೇ ನಿರ್ಧರಿಸಲಿವೆ.
ಸದ್ಯಕ್ಕೆ ಆರ್ಬಿಐ ಬಳಿ ₹ 9.69 ಲಕ್ಷ ಕೋಟಿ ಮೀಸಲು ನಿಧಿಯ ಸಂಗ್ರಹ ಇದೆ. ಇದನ್ನು ಜಾಗತಿಕ ಮಟ್ಟಕ್ಕೆ ಇಳಿಸಬೇಕು ಎಂದು ಹಣಕಾಸು ಸಚಿವಾಲಯವು ಆರ್ಬಿಐ ಮೇಲೆ ಒತ್ತಡ ತರುತ್ತಿದೆ. ಆರ್ಬಿಐನ ಸ್ವತಂತ್ರ ನಿರ್ದೇಶಕ ಎಸ್. ಗುರುಮೂರ್ತಿ ಅವರೂ ಈ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಮಾರ್ಗದರ್ಶಿ ಸೂತ್ರ: ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ (ಎಂಎಸ್ಎಂಇ) ಉದ್ದಿಮೆಗಳ ಸಾಲಕ್ಕೆ ಸಂಬಂಧಿಸಿದಂತೆ ಬಡ್ಡಿ ದರ ಕಡಿತ, ಬಡ್ಡಿ ಪಾವತಿಗೆ ತಾತ್ಕಾಲಿಕ ತಡೆ ಸೇರಿದಂತೆ ಹಲವಾರು ರಿಯಾಯ್ತಿ ಕ್ರಮಗಳನ್ನು ಒಳಗೊಂಡ ಸಾಲದ ಮರು ಹೊಂದಾಣಿಕೆಗೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳನ್ನೂ ಸದ್ಯದಲ್ಲೇ ಬಿಡುಗಡೆ ಮಾಡಲಾಗುವುದು ಎಂದೂ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.