ಮಂಗಳೂರು: ನಕಲಿ ರಸೀದಿಗಳನ್ನು ಸೃಷ್ಟಿಸಿ ಜಿಎಸ್ಟಿ ವಂಚಿಸುತ್ತಿದ್ದ ಜಾಲವನ್ನು ಇಲ್ಲಿನ ಕೇಂದ್ರ ಜಿಎಸ್ಟಿ ಅಧಿಕಾರಿ
ಗಳ ತಂಡ ಪತ್ತೆ ಮಾಡಿದೆ. ಇಬ್ಬರನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕೋರ್ಟ್ ತನಿಖೆಗಾಗಿ ಆರೋಪಿಗಳನ್ನು ಏ.1 ರವರೆಗೆ ಜಿಎಸ್ಟಿ ಅಧಿಕಾರಿಗಳ ವಶಕ್ಕೆ ನೀಡಿತು.
ಶ್ರೀನಿವಾಸ ಟ್ರೇಡರ್ಸ್ನ ಛತ್ರಭೋಜ ಭಾನುಸಾಲಿ ಹಾಗೂ ಶ್ಯಾಮ್ ಟ್ರೇಡರ್ಸ್ನ ಶ್ರೀಧರ್ ಹೆಗ್ಡೆ ಬಂಧಿತರು. ಶಿರಸಿ, ಪುತ್ತೂರು, ಮಂಗಳೂರು, ಚಿತ್ರದುರ್ಗ ಸೇರಿ ರಾಜ್ಯದ ವಿವಿಧೆಡೆ ಅಡಿಕೆ ಪೂರೈಕೆಗೆ ಸಂಬಂಧಿಸಿ ನಕಲಿ ರಸೀದಿಗಳನ್ನು ಈ ಜಾಲ ನೀಡುತ್ತಿತ್ತು. ಜೊತೆಗೆ ಕೆಲ ಟ್ರಾನ್ಸ್ಪೋರ್ಟ್ ಕಂಪನಿಗಳೂ ಶಾಮೀಲಾಗಿರುವುದು ಪತ್ತೆಯಾಗಿದೆ.
ಕಂಪನಿಗಳುರಸೀದಿಯಲ್ಲಿ ನೀಡಿದ್ದ ವಿಳಾಸಕ್ಕೆ ಹೋಗಿ ನೋಡಿದಾಗ ಪೀಠೋಪಕರಣ, ಕಂಪ್ಯೂಟರ್, ದಾಖಲೆಗಳು ಯಾವುದೂ ಇರಲಿಲ್ಲ. ಈ ವಿಳಾಸವನ್ನು ಕೇವಲ ಜಿಎಸ್ಟಿ ನೋಂದಣಿಗಾಗಿ ಬಳಸಲಾಗಿದೆ ಎಂಬುದು ಖಚಿತವಾಗಿದೆ. ಬಂಧಿತರಿಂದ ದಾಖಲೆಗಳು ಹಾಗೂ ಫೋನ್ ಸಂಭಾಷಣೆ ವಿವರಗಳನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ.
₹17 ಕೋಟಿಯಷ್ಟು ಜಿಎಸ್ಟಿ ವಂಚಿಸಿರುವುದು ಪತ್ತೆಯಾಗಿದ್ದು, ₹3.2 ಕೋಟಿ ವಸೂಲಿ ಮಾಡಲಾಗಿದೆ. ಕೇಂದ್ರ ಜಿಎಸ್ಟಿ ಆಯುಕ್ತ ಇಮಾಮುದ್ದೀನ್ ಅಹ್ಮದ್ ನೇತೃತ್ವದಲ್ಲಿ ಸಹಾಯಕ ಆಯುಕ್ತ ರಾಜೇಶ್ ಪೂಜಾರಿ, ಅಧೀಕ್ಷಕರಾದ ರಾಜಗೋಪಾಲ್, ಪುಷ್ಪೇಂದ್ರ ಸಿಂಗ್, ಇನ್ಸ್ಪೆಕ್ಟರ್ಗಳಾದ ಪಾರ್ಥಸಾರಥಿ, ಶೈಲೇಂದ್ರ ಜೈನ್, ಅರ್ಪಿತ್ ಕರ್ಮಾ, ಅಭಿನವ ಕುಮಾರ್ ಅವರನ್ನು ಒಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.