ಮುಂಬೈನಲ್ಲಿ ನಡೆದ ಜಾಗತಿಕ ಫಿನ್ಟೆಕ್ ಉತ್ಸವದಲ್ಲಿ ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್, ಭಾರತದ ಪ್ರಧಾನಿ ನರೇಂದ್ರ ಮೋದಿ, ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಭಾಗಿಯಾಗಿದ್ದರು.
–ಪಿಟಿಐ ಚಿತ್ರ
ಮುಂಬೈ: ಭಾರತದ ಬೆಳವಣಿಗೆಯ ಪಯಣದಲ್ಲಿ ಭಾಗಿಯಾಗುವಂತೆ ಜಾಗತಿಕ ಉದ್ಯಮಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಕರೆ ನೀಡಿದರು.
ಜಾಗತಿಕ ಫಿನ್ಟೆಕ್ ಉತ್ಸವವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಹಿಂದೆ ಬ್ಯಾಂಕಿಂಗ್ ವ್ಯವಸ್ಥೆಯು ಕೆಲವರಿಗೆ ಮಾತ್ರ ದಕ್ಕುತ್ತಿತ್ತು. ಆದರೆ ಡಿಜಿಟಲ್ ತಂತ್ರಜ್ಞಾನವು ಇದನ್ನು ಸಬಲೀಕರಣದ ಅಸ್ತ್ರವನ್ನಾಗಿ ಪರಿವರ್ತಿಸಿದೆ. ಇಂದು ಡಿಜಿಟಲ್ ಪಾವತಿಗಳು ನಿತ್ಯ ಜೀವನದ ಭಾವಾಗಿವೆ. ಇದರ ಶ್ರೇಯವು ಜನಧನ್ ಖಾತೆ, ಆಧಾರ್ ಯೋಜನೆ ಮತ್ತು ಸ್ಮಾರ್ಟ್ಫೋನ್ಗಳಿಗೆ ಸಲ್ಲಬೇಕು’ ಎಂದರು.
ಫಿನ್ಟೆಕ್ ವಲಯದಲ್ಲಿ ಭಾರತ ಹೊಂದಿರುವ ತಾಕತ್ತಿಗೆ ಜಾಗತಿಕ ಮಟ್ಟದಲ್ಲಿ ಮಾನ್ಯತೆ ಸಿಗುತ್ತಿದೆ. ಭಾರತವು ತಂತ್ರಜ್ಞಾನವನ್ನು ಇತರ ದೇಶಗಳ ಜೊತೆ ಹಂಚಿಕೊಳ್ಳುವುದಷ್ಟೇ ಅಲ್ಲದೆ, ಆ ದೇಶಗಳು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವಲ್ಲಿಯೂ ನೆರವಾಗುತ್ತಿದೆ ಎಂದರು.
ದೇಶದ ಫಿನ್ಟೆಕ್ ವಲಯವನ್ನು ಶ್ಲಾಘಿಸಿದ ಪ್ರಧಾನಿ, ‘ನಮ್ಮ ದೇಶಿ ತಂತ್ರಜ್ಞಾನವು ಜಾಗತಿಕ ಮಟ್ಟದಲ್ಲಿ ಪ್ರಸ್ತುತವಾಗುತ್ತಿದೆ’ ಎಂದರು.
ಭಾರತವು ಪ್ರಜಾತಂತ್ರದ ತಾಯಿ ಎಂದು ಹೇಳಿದ ಪ್ರಧಾನಿ, ‘ನಾವು ಜನತಂತ್ರದ ಬಗ್ಗೆ ಮಾತನಾಡಿದಾಗ ಅದು ಚುನಾವಣೆಗಳು, ನೀತಿ ನಿರ್ಧಾರಗಳಿಗೆ ಮಾತ್ರ ಸೀಮಿತವಲ್ಲ. ಭಾರತವು ಪ್ರಜಾತಾಂತ್ರಿಕ ಆಶಯವನ್ನು ಆಡಳಿತದ ಬಲಿಷ್ಠ ಆಧಾರಸ್ತಂಭವನ್ನಾಗಿಸಿದೆ. ಇದಕ್ಕೆ ಉತ್ತಮ ಉದಾಹರಣೆ ತಂತ್ರಜ್ಞಾನ’ ಎಂದರು. ಹಿಂದಿನ ದಶಕದಲ್ಲಿ ಭಾರತವು ತಂತ್ರಜ್ಞಾನ ಎಲ್ಲರಿಗೂ ಲಭ್ಯವಾಗುವಂತೆ ಮಾಡಿದೆ. ಇಂದು ಭಾರತವು ತಂತ್ರಜ್ಞಾನದ ವಿಚಾರದಲ್ಲಿ ಎಲ್ಲರನ್ನೂ ಒಳಗೊಳ್ಳುವ ದೇಶವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್, ಭಾರತ ಮತ್ತು ಬ್ರಿಟನ್ ನಡುವೆ ಜುಲೈನಲ್ಲಿ ಆಗಿರುವ ಮುಕ್ತ ವ್ಯಾಪಾರ ಒಪ್ಪಂದವು ಎರಡೂ ದೇಶಗಳ ಜಿಡಿಪಿಗೆ ಕೊಡುಗೆ ನೀಡಲಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.