ADVERTISEMENT

ಜಿಎಸ್‌ಟಿ ವಂಚನೆ ವಿರುದ್ಧ ಕ್ರಮ, ಒಟ್ಟು 187 ಜನರ ಬಂಧನ

ಪಿಟಿಐ
Published 3 ಜನವರಿ 2021, 16:03 IST
Last Updated 3 ಜನವರಿ 2021, 16:03 IST

ನವದೆಹಲಿ: ವಿವಿಧ ಸಂಸ್ಥೆಗಳಿಂದ ಮಾಹಿತಿ ಪಡೆದು, ದತ್ತಾಂಶ ವಿಶ್ಲೇಷಣೆಯ ನೆರವು ಪಡೆದು ಕೇಂದ್ರ ಸರ್ಕಾರವು ಜಿಎಸ್‌ಟಿ ವಂಚಕರ ವಿರುದ್ಧ ಸಮರ ಸಾರಿದೆ ಎಂದು ಕೇಂದ್ರ ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಭಾನುವಾರ ಹೇಳಿದ್ದಾರೆ. ಜಿಎಸ್‌ಟಿ ತೆರಿಗೆ ವಂಚನೆ ಆರೋಪದ ಅಡಿ ಅಂದಾಜು ಏಳು ಸಾವಿರ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸುವ ಪ್ರಕ್ರಿಯೆ ಶುರುವಾಗಿದೆ, 187 ಜನರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

2020ರ ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರವು ದಾಖಲೆಯ ₹ 1.15 ಲಕ್ಷ ಕೋಟಿ ಮೊತ್ತವನ್ನು ಜಿಎಸ್‌ಟಿ ಮೂಲಕ ಸಂಗ್ರಹಿಸಿದೆ. ಅರ್ಥ ವ್ಯವಸ್ಥೆಯಲ್ಲಿ ಚೇತರಿಕೆ ಆಗುತ್ತಿರುವುದರ ಜೊತೆಯಲ್ಲೇ, ಜಿಎಸ್‌ಟಿ ತೆರಿಗೆ ವಂಚಕರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು ಕೂಡ ದಾಖಲೆಯ ತೆರಿಗೆ ಸಂಗ್ರಹಕ್ಕೆ ಒಂದು ಕಾರಣ ಎನ್ನಲಾಗಿದೆ.

ನಕಲಿ ಜಿಎಸ್‌ಟಿ ಇನ್ವಾಯ್ಸ್‌ ಸಿದ್ಧಪಡಿಸುವವರ ವಿರುದ್ಧ ಒಂದೂವರೆ ತಿಂಗಳಿನಿಂದ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿರುವ ಒಟ್ಟು 187 ಜನರಲ್ಲಿ ಐದು ಜನ ಲೆಕ್ಕ ಪರಿಶೋಧಕರು ಕೂಡ ಸೇರಿದ್ದಾರೆ ಎಂದು ಪಾಂಡೆ ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.