ADVERTISEMENT

ಈರುಳ್ಳಿ ರಫ್ತು ಉತ್ತೇಜನ ಹೆಚ್ಚಳ

ಈರುಳ್ಳಿ ಬೆಲೆ ಕುಸಿತ: ಸರ್ಕಾರದ ವಿರುದ್ಧ ಶಿವಸೇನಾ ಕಿಡಿ

ಪಿಟಿಐ
Published 28 ಡಿಸೆಂಬರ್ 2018, 17:09 IST
Last Updated 28 ಡಿಸೆಂಬರ್ 2018, 17:09 IST
ONION
ONION   

ಮುಂಬೈ: ಈರುಳ್ಳಿ ಬೆಲೆ ತೀವ್ರವಾಗಿ ಕುಸಿತ ಕಂಡಿದ್ದರಿಂದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನಾ, ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡಲು ಸಿದ್ಧವಾಗಿರುವ ಸರ್ಕಾರವು ರೈತರಿಗೆ ಏಕೆ ಪರಿಹಾರ ನೀಡುತ್ತಿಲ್ಲ ಎಂದು ಪ್ರಶ್ನಿಸಿದೆ.

ಪಕ್ಷದ ಮುಖವಾಣಿ ‘ಸಾಮ್ನಾದಲ್ಲಿ ಸಂಪಾದಕೀಯ ಬರೆದಿರುವ ಪಕ್ಷವು, ಔರಂಗಾಬಾದ್‌ನ ವಿಜಾಪುರ್‌ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) ಈರುಳ್ಳಿ ಬೆಲೆಯು ಗುರುವಾರ 20 ಪೈಸೆಗೆ ಮಾರಾಟವಾಗಿತ್ತು ಎಂದು ಉಲ್ಲೇಖಿಸಿದೆ.

ಇದಕ್ಕೆ ಕೆಂಡಾಮಂಡಲವಾಗಿರುವ ಶಿವಸೇನಾ, ಫಡಣವೀಸ್‌ ಸರ್ಕಾರಕ್ಕೆ ಈರುಳ್ಳಿಯು ಬಾಂಬ್ ಆಗಿ ಸ್ಫೋಟಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದೆ.

ADVERTISEMENT

ಈರುಳ್ಳಿ, ಹತ್ತಿ, ಟೊಮೆಟೊ ಬೆಳೆಯುವ ರೈತರ ಸ್ಥಿತಿಯ ನಿಜವಾದ ಚಿತ್ರಣ ಸರ್ಕಾರದ ಬಳಿ ಇಲ್ಲ ಎಂದು ಹೇಳಿರುವ ಸೇನಾ, ಅವರಿಗೆ ಭರವಸೆ ಮೂಡಿಸುವ ಕೆಲಸವನ್ನೂ ಸರ್ಕಾರ ಮಾಡಿಲ್ಲ ಎಂದು ಟೀಕಿಸಿದೆ.

ಈರುಳ್ಳಿ ರಫ್ತು ಉತ್ತೇಜನ ಹೆಚ್ಚಳ

ಕುಸಿಯುತ್ತಿರುವ ಬೆಲೆಗೆ ಕಡಿವಾಣ ಹಾಕಿ ಬೆಳೆಗಾರರಿಗೆ ಉತ್ತಮ ಬೆಲೆ ದೊರೆಯುವಂತೆ ಮಾಡಲು ಕೇಂದ್ರ ಸರ್ಕಾರವು ಈರುಳ್ಳಿ ರಫ್ತು ಉತ್ತೇಜನೆ ಹೆಚ್ಚಿಸಿದೆ.

ಹೊಸ ಫಸಲಿನ ರಫ್ತಿಗೆ ಸದ್ಯಕ್ಕೆ ಈರುಳ್ಳಿ ವರ್ತಕರಿಗೆ ಶೇ 5ರಷ್ಟು ರಫ್ತು ಉತ್ತೇಜನೆ ನೀಡಲಾಗುತ್ತಿದೆ. ರೈತರ ಹಿತಾಸಕ್ತಿ ರಕ್ಷಿಸಲು ಈ ಉತ್ತೇಜನೆಯನ್ನು ಶೇ 10ಕ್ಕೆ ಹೆಚ್ಚಿಸಲಾಗಿದೆ.

ಬೆಲೆ ಕುಸಿತಕ್ಕೆ ಕಡಿವಾಣ ಹಾಕಲು, ಸರ್ಕಾರ ಈರುಳ್ಳಿ ರಫ್ತು ಹೆಚ್ಚಿಸಲು ಉದ್ದೇಶಿಸಿದೆ. ಇದರಿಂದ ದೇಶಿ ಮಾರುಕಟ್ಟೆಯಲ್ಲಿ ಬೆಲೆಗಳು ಸ್ಥಿರತೆ ಕಾಣಲಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.