ADVERTISEMENT

3.40 ಲಕ್ಷ ಟನ್‌ ತೊಗರಿ ಖರೀದಿ: ಕರ್ನಾಟಕದಿಂದ ಅತಿಹೆಚ್ಚು ಖರೀದಿ; ಕೇಂದ್ರ ಸರ್ಕಾರ

ಪಿಟಿಐ
Published 18 ಏಪ್ರಿಲ್ 2025, 14:29 IST
Last Updated 18 ಏಪ್ರಿಲ್ 2025, 14:29 IST
ತೊಗರಿ
ತೊಗರಿ   

ನವದೆಹಲಿ: ಧಾರಣೆ ಕುಸಿತದಿಂದ ತೊಂದರೆಗೆ ಸಿಲುಕಿರುವ ರೈತರ ಹಿತದೃಷ್ಟಿಯಿಂದ ಬೆಲೆ ಬೆಂಬಲ ಯೋಜನೆಯಡಿ (ಪಿಎಸ್‌ಎಸ್‌) ಏಪ್ರಿಲ್‌ 13ರ ವರೆಗೆ 3.40 ಲಕ್ಷ ಟನ್‌ ತೊಗರಿ ಖರೀದಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಶುಕ್ರವಾರ ತಿಳಿಸಿದೆ. 

ಕರ್ನಾಟಕದಿಂದ ಅತಿಹೆಚ್ಚು 1.30 ಲಕ್ಷ ಟನ್‌ ತೊಗರಿ ಖರೀದಿಸಲಾಗಿದೆ. ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಲ್‌ಗೆ ₹7,550 ಬೆಲೆ ನಿಗದಿಪಡಿಸಿದೆ. ರಾಜ್ಯ ಸರ್ಕಾರ ₹450 ಪ್ರೋತ್ಸಾಹ ಧನ ಘೋಷಿಸಿದೆ. ಇದು ಖರೀದಿ ಹೆಚ್ಚಳಕ್ಕೆ ಕಾರಣವಾಗಿದೆ. 

2024–25ನೇ ಮುಂಗಾರು ಋತುವಿನಲ್ಲಿ ಕರ್ನಾಟಕ ಸೇರಿ ಆಂಧ್ರಪ್ರದೇಶ, ಛತ್ತೀಸಗಢ, ಗುಜರಾತ್‌, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ ಮತ್ತು ಉತ್ತರಪ್ರದೇಶದಲ್ಲಿ ಖರೀದಿಗೆ ಸಚಿವಾಲಯವು ಅನುಮತಿ ನೀಡಿದೆ. ಮಾರುಕಟ್ಟೆಯಲ್ಲಿ ದರ ನಿಯಂತ್ರಿಸಲು ಒಟ್ಟು 13.22 ಲಕ್ಷ ಟನ್ ತೊಗರಿಯನ್ನು ಈ ರಾಜ್ಯಗಳಿಂದ ಖರೀದಿಸಲು ಸರ್ಕಾರ ಗುರಿ ಹೊಂದಿದೆ ಎಂದು ತಿಳಿಸಿದೆ. 

ADVERTISEMENT

ತೆಲಂಗಾಣ ಮತ್ತು ಮಧ್ಯಪ್ರದೇಶದಿಂದ 17 ಸಾವಿರ ಟನ್‌ ಕಡಲೆಕಾಳು ಖರೀದಿಸಿದೆ. 28,700 ಟನ್‌ ಚೆನ್ನಂಗಿ ಬೇಳೆ (ಮಸೂರ್‌ ದಾಲ್) ಮತ್ತು 3 ಸಾವಿರ ಟನ್‌ ಹೆಸರುಕಾಳು ಖರೀದಿಸಲಾಗಿದೆ ಎಂದು ತಿಳಿಸಿದೆ.

ಮುಕ್ತ ಮಾರುಕಟ್ಟೆಯಲ್ಲಿ ಕನಿಷ್ಠ ಬೆಂಬಲ ಬೆಲೆಗಿಂತ (ಎಂಎಸ್‌ಪಿ) ಕಡಿಮೆ ದರದಲ್ಲಿ ಮಾರಾಟವಾಗುತ್ತಿದ್ದರೆ ಬೆಲೆ ಬೆಂಬಲ ಯೋಜನೆಯಡಿ ಕೃಷಿ ಹುಟ್ಟುವಳಿಗಳನ್ನು ಖರೀದಿಸಲಾಗುತ್ತದೆ ಎಂದು ಹೇಳಿದೆ.

ದೇಶದಲ್ಲಿ ದ್ವಿದಳ ಧಾನ್ಯಗಳ ಉತ್ಪಾದನೆ ಹೆಚ್ಚಿಸಲು ಕೇಂದ್ರವು ಆತ್ಮನಿರ್ಭರ ಮಿಷನ್‌ ಅನ್ನು 2028–29ರ ವರೆಗೂ ವಿಸ್ತರಿಸಿದೆ. ಕೇಂದ್ರದ ಏಜೆನ್ಸಿಗಳ ಮೂಲಕ ರೈತರಿಂದ ತೊಗರಿ, ಚೆನ್ನಂಗಿ ಬೇಳೆ ಮತ್ತು ಉದ್ದು ಖರೀದಿಸಲಾಗುವುದು ಎಂದು ಸರ್ಕಾರವು ಬಜೆಟ್‌ನಲ್ಲಿ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.