ADVERTISEMENT

ಜಿಎಸ್‌ಟಿ ಲಾಭಕೋರತನ ತಡೆಗೆ ಸ್ಪಷ್ಟ ಮಾರ್ಗದರ್ಶಿ ಸೂತ್ರ ಅಗತ್ಯ: ಸಿಐಐ

ಪಿಟಿಐ
Published 31 ಜುಲೈ 2018, 12:31 IST
Last Updated 31 ಜುಲೈ 2018, 12:31 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ನವದೆಹಲಿ : ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯಡಿ ಲಾಭಕೋರತನ ತಡೆಗೆ ಸಂಬಂಧಿಸಿದಂತೆ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೆ ತರಬೇಕು ಎಂದು ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ) ಜಿಎಸ್‌ಟಿ ಮಂಡಳಿಗೆ ಸಲಹೆ ನೀಡಿದೆ.

ಜಿಎಸ್‌ಟಿ ವ್ಯವಸ್ಥೆಯಡಿ ಇದೇ ಮೊದಲ ಬಾರಿಗೆ ಲಾಭಕೋರತನ ತಡೆ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೆ, ಜಿಎಸ್‌ಟಿಯಡಿ ಲಭ್ಯವಾಗುವ ಪ್ರಯೋಜನಗಳನ್ನು ಲೆಕ್ಕಹಾಕುವುದನ್ನು ಸ್ಪಷ್ಟಪಡಿಸಿಲ್ಲ. ಇದು ಗೊಂದಲಕ್ಕೆ ಆಸ್ಪದ ಮಾಡಿಕೊಟ್ಟು ವ್ಯಾಜ್ಯಗಳಿಗೆ ಕಾರಣವಾಗುತ್ತಿದೆ. ಇದು ವಹಿವಾಟನ್ನು ಸರಳಗೊಳಿಸುವುದನ್ನು ಉತ್ತೇಜಿಸುವ ತತ್ವಕ್ಕೆ ವಿರುದ್ಧವಾಗಿದೆ. ಬೆಲೆ ಕಡಿತದ ಪ್ರಮಾಣ ಲೆಕ್ಕ ಹಾಕುವ ಮತ್ತು ನಿರ್ದಿಷ್ಟ ಮಾನದಂಡ ಅನುಸರಿಸುವ ಬಗ್ಗೆ ಸ್ಪಷ್ಟ ಮಾರ್ಗದರ್ಶಿ ಸೂತ್ರಗಳ ಅಗತ್ಯ ಇದೆ ಎಂದು ‘ಸಿಐಐ’ ಅಭಿಪ್ರಾಯಪಟ್ಟಿದೆ.

ಇ–ವೇ ಬಿಲ್‌: ರಾಜ್ಯದ ವ್ಯಾಪ್ತಿ ಒಳಗಿನ ಸರಕುಗಳ ಸಾಗಾಣಿಕೆಗೆ ಸಂಬಂಧಿಸಿದ ಇ–ವೇ ಬಿಲ್‌ನ ಗರಿಷ್ಠ ಮೊತ್ತವನ್ನು ದೇಶದಾದ್ಯಂತ ₹ 1 ಲಕ್ಷಕ್ಕೆ ಹೆಚ್ಚಿಸಬೇಕು ಎಂದೂ ‘ಸಿಐಐ’ ಒತ್ತಾಯಿಸಿದೆ.

ADVERTISEMENT

ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನ (ಎಫ್‌ಎಂಸಿಜಿ) ಮತ್ತು ಕಿರಾಣಿ ಉತ್ಪನ್ನಗಳನ್ನು ಹಲವಾರು ಅಂಗಡಿಗಳಿಗೆ ಸಾಗಿಸಬೇಕಾಗಿರುತ್ತದೆ. ಈ ಹಂತದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತಿವೆ. ಆ ಕಾರಣಕ್ಕೆ ಈ ಗರಿಷ್ಠ ಮಿತಿ ಹೆಚ್ಚಿಸಬೇಕಾಗಿದೆ. ಕೆಲ ರಾಜ್ಯಗಳು ಈಗಾಗಲೇ ಈ ಮೊತ್ತವನ್ನು ಹೆಚ್ಚಿಸಿವೆ. ಅದನ್ನು ದೇಶದಾದ್ಯಂತ ಏಕರೂಪವಾಗಿ ಜಾರಿಗೆ ತರಬೇಕಾದ ಅಗತ್ಯ ಇದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಸದ್ಯಕ್ಕೆ ₹ 50 ಸಾವಿರದಷ್ಟು ಮೊತ್ತದ ಸರಕುಗಳನ್ನು ರಾಜ್ಯದ ಒಳಗೆ ಮತ್ತು ಹೊರಗೆ ಸಾಗಿಸಲು ಸರಕು ಸಾಗಣೆದಾರರು ಅಥವಾ ವಹಿವಾಟುದಾರರು ಕಡ್ಡಾಯವಾಗಿ ಎಲೆಕ್ಟ್ರಾನಿಕ್‌ ವೇ ಬಿಲ್‌ ಪಡೆದುಕೊಳ್ಳಬೇಕಾಗುತ್ತದೆ.

ಆಗಸ್ಟ್‌ 4ರಂದು ಸಭೆ: ಆಗಸ್ಟ್‌ 4 ರಂದು ಸಭೆ ಸೇರಲಿರುವ ಜಿಎಸ್‌ಟಿ ಮಂಡಳಿಯು ಕಿರು, ಸಣ್ಣ ಮತ್ತು ಮಧ್ಯಮ (ಎಂಎಸ್‌ಎಂಇ) ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ಸರಳಗೊಳಿಸಲು ನಿರ್ಧಾರಕ್ಕೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.