ನವದೆಹಲಿ: ಕಚ್ಚಾ ತೈಲದ ಬೆಲೆಯು ತೀರಾ ಹೆಚ್ಚಿನ ಮಟ್ಟದಲ್ಲಿ ಇರುವುದು ವಿಶ್ವದ ಆರ್ಥಿಕ ಚೇತರಿಕೆಗೆ ಅಡ್ಡಿ ಉಂಟುಮಾಡುತ್ತದೆ ಎಂದು ಭಾರತವು ಸೌದಿ ಅರೇಬಿಯಾ ಮತ್ತು ಒಪೆಕ್ ಒಕ್ಕೂಟದ ಇತರ ದೇಶಗಳಿಗೆ ಹೇಳಿದೆ.
ತೈಲ ಬೆಲೆಯು ದುಬಾರಿ ಆಗಿರುವುದು, ಇತರ ಇಂಧನ ಮೂಲಗಳತ್ತ ಹೊರಳಿಕೊಳ್ಳುವ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಇದರಿಂದಾಗಿ ಮುಂದೆ ತೈಲೋತ್ಪನ್ನ ದೇಶಗಳಿಗೇ ಹೆಚ್ಚು ತೊಂದರೆ ಆಗುತ್ತದೆ ಎಂದು ಕೂಡ ಭಾರತವು ಹೇಳಿದೆ. ‘ಉತ್ಪಾದಕ ದೇಶಗಳು ಹಾಗೂ ಬಳಕೆದಾರ ದೇಶಗಳ ಹಿತಾಸಕ್ತಿಗಳನ್ನು ರಕ್ಷಿಸುವ ರೀತಿಯಲ್ಲಿ ತೈಲ ಬೆಲೆ ಇರಬೇಕು. ಆದರೆ, ಈಗ ಬೇಡಿಕೆಯು ಪೂರೈಕೆಗಿಂತ ಜಾಸ್ತಿ ಇರುವ ಕಾರಣ ಬೆಲೆ ಹೆಚ್ಚಳ ಆಗಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.
ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ಅವರು ತೈಲ ಬೆಲೆ ದುಬಾರಿ ಆಗಿರುವುದರ ಬಗ್ಗೆ ಸೌದಿ ಅರೇಬಿಯಾ, ಯುಎಇ, ಕುವೈತ್, ಕತಾರ್, ಅಮೆರಿಕ, ರಷ್ಯಾ ಮತ್ತು ಬಹ್ರೇನ್ ದೇಶಗಳ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಈ ಅಧಿಕಾರಿ ತಿಳಿಸಿದ್ದಾರೆ. ಈ ವಾರದಲ್ಲಿ ಭಾರತ ಇಂಧನ ವೇದಿಕೆಯ ಸಭೆ ನಡೆಯಲಿದ್ದು, ಅಲ್ಲಿ ಕೂಡ ಪುರಿ ಅವರು ಇದೇ ವಿಷಯವನ್ನು ಸೌದಿ ಅರೇಬಿಯಾ ಮತ್ತು ಯುಎಇ ಪ್ರತಿನಿಧಿಗಳ ಜೊತೆ ಪ್ರಸ್ತಾಪಿಸುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.