
ನವದೆಹಲಿ: ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆಗಳು ಪೂರ್ಣಗೊಂಡಿರುವುದರ ಬಗ್ಗೆ ಹಾಗೂ ಒಪ್ಪಂದವು ಅಂತಿಮಗೊಂಡಿರುವುದರ ಬಗ್ಗೆ ಭಾರತ ಮತ್ತು ಐರೋಪ್ಯ ಒಕ್ಕೂಟವು ಮಂಗಳವಾರ ಘೋಷಣೆ ಹೊರಡಿಸುವ ನಿರೀಕ್ಷೆ ಇದೆ.
ಅಮೆರಿಕವು ವಿವಿಧ ದೇಶಗಳ ಮೇಲೆ ವಿವಿಧ ಕಾರಣಕ್ಕೆ ಸುಂಕ ಹೇರಿ, ಜಾಗತಿಕ ಮಟ್ಟದಲ್ಲಿನ ವ್ಯಾಪಾರ ವಹಿವಾಟುಗಳ ಲಯಕ್ಕೆ ಅಡ್ಡಿ ಸೃಷ್ಟಿಸಿರುವ ಸಂದರ್ಭದಲ್ಲಿ ಭಾರತ ಮತ್ತು ಐರೋಪ್ಯ ಒಕ್ಕೂಟವು ತಮ್ಮ ನಡುವಿನ ವ್ಯಾಪಾರ ಹೆಚ್ಚಿಸಿಕೊಳ್ಳಲು ಈ ಕ್ರಮಕ್ಕೆ ಮುಂದಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕಾಗಿ (ಎಫ್ಟಿಎ) ಮಾತುಕತೆ 2007ರಲ್ಲಿ ಶುರುವಾಗಿತ್ತು. ಭಾರತವು ಇದುವರೆಗೆ ಮಾಡಿಕೊಂಡಿರುವ ಎಲ್ಲ ಒಪ್ಪಂದಗಳ ಪಾಲಿಗೆ ಈ ಒಪ್ಪಂದವು ‘ತಾಯಿಯಂತೆ’ ಇರಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಬಣ್ಣಿಸಿದ್ದಾರೆ.
ಮಾತುಕತೆಯು ಪೂರ್ಣಗೊಂಡಿರುವುದರ ಘೋಷಣೆಯನ್ನು ಭಾರತ – ಐರೋಪ್ಯ ಒಕ್ಕೂಟ ಶೃಂಗದಲ್ಲಿ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಐರೋಪ್ಯ ಆಯೋಗದ ಅಧ್ಯಕ್ಷೆ ಉರ್ಸುಲಾ ಫಾಂಡರ್ ಲೇಯನ್ ಅವರು ನಾಲ್ಕು ದಿನಗಳ ಭಾರತ ಭೇಟಿಯನ್ನು ಶನಿವಾರ ಆರಂಭಿಸಿದ್ದಾರೆ.
ಐರೋಪ್ಯ ಆಯೋಗದ ಅಧ್ಯಕ್ಷ ಆ್ಯಂಟೊನಿಯೊ ಕೊಸ್ಟಾ ಹಾಗೂ ಫಾಂಡರ್ ಲೇಯನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಂಗಳವಾರ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಭಾರತ ಮತ್ತು ಐರೋಪ್ಯ ಒಕ್ಕೂಟದ ಅಧಿಕಾರಿಗಳು ಮುಕ್ತ ವ್ಯಾಪಾರ ಒಪ್ಪಂದದ ಕಡತಗಳಿಗೆ ಸಹಿ ಹಾಕುವ ಮೊದಲು, ಕಡತಗಳಲ್ಲಿನ ವಿವರಗಳ ಕಾನೂನು ಪರಿಶೀಲನೆ ನಡೆಯಲಿದೆ. ಸಹಿ ಹಾಕುವ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ. ಒಪ್ಪಂದಕ್ಕೆ ಐರೋಪ್ಯ ಒಕ್ಕೂಟದ ಸಂಸತ್ತಿನ ಒಪ್ಪಿಗೆ, ಭಾರತದಲ್ಲಿ ಕೇಂದ್ರ ಸಂಪುಟದ ಒಪ್ಪಿಗೆ ಅಗತ್ಯ.
ಅಭಿವೃದ್ಧಿ ಹೊಂದಿರುವ 27 ದೇಶಗಳ ಐರೋಪ್ಯ ಒಕ್ಕೂಟದ ಜೊತೆ ಭಾರತ ಮಾಡಿಕೊಳ್ಳಲಿರುವ ಒಪ್ಪಂದವು ಅತಿ ದೊಡ್ಡದಾಗಿರಲಿದೆ. ಈ ಒಪ್ಪಂದವು ಚೀನಾ ಮೇಲಿನ ಅವಲಂಬನೆಯನ್ನು ತಗ್ಗಿಸಲು ನೆರವಾಗಲಿದೆ.
ಒಪ್ಪಂದದ ಮಾತುಕತೆ ಸಂದರ್ಭದಲ್ಲಿ ಐರೋಪ್ಯ ಒಕ್ಕೂಟವು ತನ್ನ ಗೋಮಾಂಸ, ಸಕ್ಕರೆ ಮತ್ತು ಅಕ್ಕಿ ಮಾರುಕಟ್ಟೆಯ ಹಿತವನ್ನು ಕಾಪಾಡಿಕೊಂಡಿದೆ. ಭಾರತವು ತನ್ನ ಕೃಷಿ, ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರುಕಟ್ಟೆಯ ಹಿತವನ್ನು ಕಾಯ್ದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.