ನವದೆಹಲಿ: ಕಚ್ಚಾ ತೈಲವು ದುಬಾರಿ ಆಗಿರುವ ಪರಿಸ್ಥಿತಿಯನ್ನು ನಿಭಾಯಿಸಬೇಕು ಎಂದಾದರೆ ಭಾರತವು ತನ್ನ ಸಂಗ್ರಹಾಗಾರಗಳಲ್ಲಿ ಇರುವ ತೈಲವನ್ನು ಬಳಸಿಕೊಳ್ಳಬೇಕು ಎಂದು ಸೌದಿ ಅರೇಬಿಯಾದ ಇಂಧನ ಸಚಿವರು ನೀಡಿದ್ದ ಹೇಳಿಕೆಯು, ‘ರಾಜತಾಂತ್ರಿಕವಾಗಿ ಸರಿಯಲ್ಲ’ ಎಂದು ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
‘ಆ ರೀತಿಯ ಹೇಳಿಕೆಗಳನ್ನು ನಾನು ಸಮ್ಮತಿಸುವುದಿಲ್ಲ ಎಂದು ನಮ್ರವಾಗಿ ಹೇಳುತ್ತೇನೆ. ನಮ್ಮ ಸಂಗ್ರಹಾಗಾರಗಳಲ್ಲಿ ಇರುವ ತೈಲವನ್ನು ಯಾವಾಗ, ಹೇಗೆ ಬಳಸಬೇಕು ಎಂಬ ವಿಚಾರದಲ್ಲಿ ನಮ್ಮದೇ ಆದ ಕಾರ್ಯತಂತ್ರ ಇರುತ್ತದೆ. ನಮ್ಮ ಹಿತಾಸಕ್ತಿಗಳ ಬಗ್ಗೆ ನಮಗೆ ಅರಿವಿದೆ’ ಎಂದು ಪ್ರಧಾನ್ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಕಚ್ಚಾ ತೈಲ ಬೆಲೆ ತಗ್ಗಬೇಕು ಎಂದಾದರೆ, ತೈಲದ ಪೂರೈಕೆಯನ್ನು ‘ಒಪೆಕ್+’ ರಾಷ್ಟ್ರಗಳು ಹೆಚ್ಚಿಸಬೇಕು ಎಂದು ಪ್ರಧಾನ್ ಅವರು ಆಗ್ರಹಿಸಿದ್ದರು. ಈ ಆಗ್ರಹಕ್ಕೆ ಪ್ರತಿಯಾಗಿ ಸೌದಿ ಅರೇಬಿಯಾದ ಇಂಧನ ಸಚಿವ ರಾಜಕುಮಾರ ಅಬ್ದುಲ್ಅಜೀಜ್ ಬಿನ್ ಸಲ್ಮಾನ್ ಅವರು ‘ಭಾರತವು ಹಿಂದಿನ ವರ್ಷ ಅಗ್ಗದ ಬೆಲೆಗೆ ಖರೀದಿಸಿ, ಸಂಗ್ರಹಾಗಾರಗಳಲ್ಲಿ ಭರ್ತಿ ಮಾಡಿಕೊಂಡಿರುವ ತೈಲವನ್ನು ಬಳಸಿಕೊಳ್ಳಲಿ’ ಎಂದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.