ನವದೆಹಲಿ: ತೈಲ ಬೆಲೆ ಇಳಿಸುವ ದೃಷ್ಟಿಯಿಂದ ಭಾರತವು ತನ್ನ ತುರ್ತು ದಾಸ್ತಾನಿನಿಂದ 50 ಲಕ್ಷ ಬ್ಯಾರಲ್ ಮೀಸಲು ಕಚ್ಚಾ ತೈಲ ಬಿಡುಗಡೆಗೊಳಿಸಲು ಯೋಜಿಸಿದೆ ಎಂದು ಕೇಂದ್ರದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತಂತ ಅಮೆರಿಕವು, ಭಾರತ, ಜಪಾನ್ ಸೇರಿದಂತೆ ಇತರೆ ದೊಡ್ಡ ಆರ್ಥಿಕತೆ ಹೊಂದಿರುವ ದೇಶಗಳಿಗೆ ಮನವಿ ಮಾಡಿತ್ತು.
ಪೂರ್ವ ಮತ್ತು ಪಶ್ಚಿಮ ಕರಾವಳಿಯ ಮೂರು ಪ್ರದೇಶಗಳ ನೆಲದಡಿಯ ಚೇಂಬರ್ಗಳಲ್ಲಿ ಸುಮಾರು 3.8 ಕೋಟಿ ಬ್ಯಾರಲ್ ಕಚ್ಚಾ ತೈಲವನ್ನು ಭಾರತ ಶೇಖರಿಸಿಟ್ಟಿದೆ.
ಏಳೆಂಟು ದಿನಗಳಲ್ಲಿ ಇದರಲ್ಲಿ 50 ಲಕ್ಷ ಬ್ಯಾರಲ್ ಕಚ್ಚಾ ತೈಲ ಬಿಡುಗಡೆಗೆ ಯೋಜಿಸಲಾಗಿದೆ ಎಂದು ಹೆಸರನ್ನು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.
ಕಚ್ಚಾ ತೈಲ ದಾಸ್ತಾನಿಗೆ ಪೈಪ್ ಲೈನ್ ಸಂಪರ್ಕ ಹೊಂದಿರುವ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್ಪಿಎಲ್) ಮತ್ತು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್(ಎಚ್ಪಿಸಿಎಲ್) ಮೂಲಕ ಈ ತೈಲವನ್ನು ಮಾರಾಟ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
‘ಮುಂದಿನ ದಿನಗಳಲ್ಲಿ ಮೀಸಲಿರುವ ಮತ್ತಷ್ಟು ತೈಲ ಬಿಡುಗಡೆ ಬಗ್ಗೆ ಚಿಂತಿಸಬಹುದು’ಎಂದು ಹೇಳಿರುವ ಅಧಿಕಾರಿ, ದಿನದಾಂತ್ಯದ ಹೊತ್ತಿಗೆ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.