ADVERTISEMENT

ಚೇತರಿಕೆ ಹಾದಿಯಲ್ಲಿ ಆರ್ಥಿಕತೆ: ಎಸ್‌ಆ್ಯಂಡ್‌ಪಿ

ಪಿಟಿಐ
Published 16 ಫೆಬ್ರುವರಿ 2021, 15:55 IST
Last Updated 16 ಫೆಬ್ರುವರಿ 2021, 15:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತದ ಆರ್ಥಿಕತೆಯು ಏಪ್ರಿಲ್‌ 1ರಿಂದ ಆರಂಭವಾಗಲಿರುವ ಹಣಕಾಸು ವರ್ಷದಲ್ಲಿ ಚೇತರಿಕೆಯ ಹಾದಿಗೆ ಬರಲಿದೆ ಎಂದು ಜಾಗತಿಕ ರೇಟಿಂಗ್ಸ್‌ ಸಂಸ್ಥೆ ಎಸ್‌ಆ್ಯಂಡ್‌ಪಿ ಮಂಗಳವಾರ ಹೇಳಿದೆ.

ಕೃಷಿ ವಲಯದ ಉತ್ತಮ ಬೆಳವಣಿಗೆ, ಕೋವಿಡ್‌–19 ಪ್ರಕರಣಗಳು ಕಡಿಮೆಯಾಗುತ್ತಿರುವುದು ಹಾಗೂ ಸರ್ಕಾರದ ವೆಚ್ಚಗಳಲ್ಲಿ ಏರಿಕೆ ಆಗುತ್ತಿರುವುದರಿಂದ ಆರ್ಥಿಕ ಚೇತರಿಕೆಗೆ ಬಲ ಸಿಗುತ್ತಿದೆ ಎಂದು ಅದು ವಿವರಿಸಿದೆ.

ಈ ಚೇತರಿಕೆಯು ಇದೇ ರೀತಿ ಮುಂದುವರಿಯಲು ಹಲವು ಅಂಶಗಳ ಬೆಂಬಲದ ಅಗತ್ಯವಿದೆ. ಅದರಲ್ಲಿಯೂ ಮುಖ್ಯವಾಗಿ 136 ಕೋಟಿ ಜನರಿಗೆ ಕೋವಿಡ್‌–19 ಲಸಿಕೆಯನ್ನು ತ್ವರಿತವಾಗಿ ನೀಡಬೇಕಿದೆ ಎಂದು ಹೇಳಿದೆ.

ADVERTISEMENT

2021–22ನೇ ಹಣಕಾಸು ವರ್ಷದ ಬಜೆಟ್‌ನಲ್ಲಿ ನಿರೀಕ್ಷೆಗಿಂತಲೂ ಅಧಿಕ ವೆಚ್ಚ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಇದುಆರ್ಥಿಕ ಚೇತರಿಕೆಗೆ ಬಲ ನೀಡಲಿದೆ. ಭಾರತವು, ಸಾಂಕ್ರಾಮಿಕ ಪೂರ್ವದ ಸ್ಥಿತಿಗೆ ಹೋಲಿಸಿದರೆ, ಜಿಡಿಪಿಯ ಶೇ 10ಕ್ಕೆ ಸಮನಾದ ದೀರ್ಘಕಾಲೀನ ಉತ್ಪಾದನಾ ಕೊರತೆಯನ್ನು ಎದುರಿಸಲಿದೆ.

ಬ್ಯಾಂಕಿಂಗ್‌ ವಲಯದ ವಸೂಲಾಗದ ಸಾಲದ ಪ್ರಮಾಣವು ಒಟ್ಟಾರೆ ಸಾಲದ ಶೇ 12ರಷ್ಟಿದೆ. ಆರ್ಥಿಕತೆಯು ವೇಗವಾಗಿ ಚೇತರಿಕೆ ಕಾಣುತ್ತಿರುವುದು ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಭಾರತ ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ ಬ್ಯಾಂಕ್ ಗಳ ಹಣಕಾಸಿನ ಸ್ಥಿತಿಯ ಮೇಲಿನ ಒತ್ತಡ ಕಡಿಮೆ ಆಗಲಿದೆ.

2020ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಶೇ 10ರಷ್ಟು ಚೇತರಿಕೆ ಕಾಣಲಿದ್ದು,ದೇಶದ ಬ್ಯಾಂಕಿಂಗ್‌ ವ್ಯವಸ್ಥೆಯು 2023ನೇ ಹಣಕಾಸು ವರ್ಷದಲ್ಲಿ ಸುಧಾರಣೆ ಕಂಡುಕೊಳ್ಳಲು ಆರಂಭಿಸುವ ಸಾಧ್ಯತೆ ಇದೆ. ಕೋವಿಡ್‌–19 ಬಿಕ್ಕಟ್ಟನ್ನು ಎದುರಿಸಲು ಬ್ಯಾಂಕ್‌ಗಳು ಹೆಚ್ಚುವರಿ ಬಂಡವಾಳವನ್ನು ಸಂಗ್ರಹಿಸುತ್ತಿರುವುದು ಸಕಾರಾತ್ಮಕ ಅಂಶವಾಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.