ನವದೆಹಲಿ: ‘ಹಣದುಬ್ಬರವು ನಿಯಂತ್ರಿಸಬಹುದಾದ ಮಟ್ಟಕ್ಕೆ ಇಳಿಕೆ ಆಗಿದೆ. ಹೀಗಾಗಿ ಆರ್ಥಿಕ ಬೆಳವಣಿಗೆಯು ಸರ್ಕಾರದ ಆದ್ಯತೆಯಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ತಿಳಿಸಿದ್ದಾರೆ.
‘ಉದ್ಯೋಗ ಸೃಷ್ಟಿ ಮತ್ತು ಸಂಪತ್ತಿನ ಸಮಾನ ಹಂಚಿಕೆಯು ಆದ್ಯತೆಯ ಇತರ ವಿಷಯಗಳಾಗಿವೆ’ ಎಂದು ಇಂಡಿಯಾ ಐಡಿಯಾಸ್ ಸಮಿತ್ನಲ್ಲಿ ಅವರು ಹೇಳಿದ್ದಾರೆ.
‘ಹಣದುಬ್ಬರವು ಆದ್ಯತಾ ವಿಷಯ ಅಲ್ಲ. ಆದ್ಯತೆ ಅಲ್ಲ ಎನ್ನುವುದು ಹಲವರಲ್ಲಿ ಅಚ್ಚರಿ ಮೂಡಿಸುವುದಿಲ್ಲ ಎಂದು ನಾನು ಭಾವಿಸುವೆ. ಏಕೆಂದರೆ, ಕೆಲವು ತಿಂಗಳುಗಳಿಂದ ಹಣದುಬ್ಬರವನ್ನು ನಿಯಂತ್ರಿಸಬಹುದಾದ ಮಟ್ಟಕ್ಕೆ ತರಲಾಗಿದೆ’ ಎಂದು ನಿರ್ಮಲಾ ತಿಳಿಸಿದ್ದಾರೆ.
ಅಮೆರಿಕ ಮತ್ತು ಯುರೋಪ್ನ ಕೇಂದ್ರೀಯ ಬ್ಯಾಂಕ್ಗಳು ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿದರ ಏರಿಸುತ್ತಿವೆ. ಇದರಿಂದಾಗಿ ಉಂಟಾಗುತ್ತಿರುವ ಅಸ್ಥಿರತೆಯನ್ನು ಆರ್ಬಿಐ ನಿರ್ವಹಿಸುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
ಚಿಲ್ಲರೆ ಹಣದುಬ್ಬರ ಪ್ರಮಾಣವು ಜೂನ್ನಲ್ಲಿ ಶೇ 7.01ರಷ್ಟು ಇದ್ದಿದ್ದು ಜುಲೈನಲ್ಲಿ ಶೇ 6.71ಕ್ಕೆ ಇಳಿಕೆ ಆಗಿದೆ. ಹೀಗಿದ್ದರೂ ಸತತ ಏಳನೇ ತಿಂಗಳಿನಲ್ಲಿಯೂ ಹಣದುಬ್ಬರವು ಆರ್ಬಿಐ ನಿಗದಿ ಮಾಡಿಕೊಂಡಿರುವ ಗರಿಷ್ಠ ಮಟ್ಟವಾದ ಶೇ 6ಕ್ಕಿಂತ ಹೆಚ್ಚಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.