ನವದೆಹಲಿ: ‘ಚಿಲ್ಲರೆ ಹಣದುಬ್ಬರವು ಅಕ್ಟೋಬರ್ನಲ್ಲಿ ಶೇ 7ಕ್ಕಿಂತಲೂ ಕಡಿಮೆ ಆಗಿರುವ ವಿಶ್ವಾಸ ಇದೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಶನಿವಾರ ಹೇಳಿದ್ದಾರೆ.
‘ಬೆಲೆ ಏರಿಕೆಯೇ ದೊಡ್ಡ ಸವಾಲು ಎಂದಿರುವ ಅವರು, ‘ಕೇಂದ್ರ ಸರ್ಕಾರ ಮತ್ತು ಆರ್ಬಿಐ ಕಳೆದ ಆರರಿಂದ ಏಳು ತಿಂಗಳುಗಳಲ್ಲಿ ತೆಗೆದುಕೊಂಡಿರುವ ಕ್ರಮಗಳಿಂದಾಗಿ ಅಕ್ಟೋಬರ್ನಲ್ಲಿ ಹಣದುಬ್ಬರವು ಇಳಿಕೆ ಆಗುವ ನಿರೀಕ್ಷೆ ಮಾಡಲಾಗಿದೆ’ ಎಂದು ಸಮಾವೇಶವೊಂದರಲ್ಲಿ ತಿಳಿಸಿದ್ದಾರೆ.
‘ಆರ್ಬಿಐ ರೆಪೊ ದರ ಹೆಚ್ಚಿಸಿದ್ದರೆ, ಕೇಂದ್ರ ಸರ್ಕಾರವು ಪೂರೈಕೆ ವ್ಯವಸ್ಥೆ ಸುಧಾರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಪ್ರಕಟಿಸಿದೆ’ ಎಂದು ತಿಳಿಸಿದ್ದಾರೆ.
ಅಕ್ಟೋಬರ್ ತಿಂಗಳ ಚಿಲ್ಲರೆ ಹಣದುಬ್ಬರದ ಅಂಕಿ–ಅಂಶವು ಸೋಮವಾರ ಬಿಡುಗಡೆ ಆಗುವ ನಿರೀಕ್ಷೆ ಮಾಡಿರುವುದಾಗಿ ಅವರು ಹೇಳಿದ್ದಾರೆ. ‘ಹಣದುಬ್ಬರದ ಗುರಿಯನ್ನು ಬದಲಾಯಿಸುವ ಅಗತ್ಯ ಇಲ್ಲ. ಏಕೆಂದರೆ ಶೇ 6ಕ್ಕಿಂತ ಹೆಚ್ಚಿನ ಮಟ್ಟದ ಹಣದುಬ್ಬರವು ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ’ ಎಂದು ದಾಸ್ ಹೇಳಿದ್ದಾರೆ.
ಚಿಲ್ಲರೆ ಹಣದುಬ್ಬರವು ಆಗಸ್ಟ್ನಲ್ಲಿ ಶೇ 7ರಷ್ಟು ಇದ್ದಿದ್ದು, ಆಹಾರ ಮತ್ತು ಇಂಧನ ವೆಚ್ಚದಲ್ಲಿ ಏರಿಕೆ ಆಗಿದ್ದರಿಂದ ಸೆಪ್ಟೆಂಬರ್ನಲ್ಲಿ ಶೇ 7.4ಕ್ಕೆ ಏರಿಕೆ ಆಗಿತ್ತು.
ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುವ ಪ್ರಮುಖ ಆರ್ಥಿಕತೆಯಾಗಿಯೇ ಭಾರತ ಮುಂದುವರಿಯಲಿದೆ ಎನ್ನುವ ವಿಶ್ವಾಸವನ್ನು ದಾಸ್ ವ್ಯಕ್ತಪಡಿಸಿದ್ದಾರೆ.
ದೇಶದ ಆರ್ಥಿಕ ತಳಹದಿ ಬಲಿಷ್ಠವಾಗಿ ಇರುವುದು ಹಾಗೂ ಹಣಕಾಸು ವಲಯವು ಸ್ಥಿರವಾಗಿ ಇರುವುದರಿಂದ 2022–23ರಲ್ಲಿ ಜಿಡಿಪಿಯು ಶೇ 7ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆ ಇದೆ ಎಂದಿದ್ದಾರೆ.
ಜಗತ್ತು ಹಲವು ರೀತಿಯ ಆಘಾತಗಳಿಗೆ ಒಳಗಾಗಿದೆ. ಕೋವಿಡ್ ಸಾಂಕ್ರಾಮಿಕ, ರಷ್ಯಾ–ಉಕ್ರೇನ್ ಸಮರ ಹಾಗೂ ಹಣಕಾಸು ಮಾರುಕಟ್ಟೆಯಲ್ಲಿ ಎದುರಾಗಿರುವ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.