ನವದೆಹಲಿ: ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಹೆಲ್ತ್ ಇನ್ಶುರೆನ್ಸ್ ಲಿಮಿಟೆಡ್, ಹೊಸ ವಿಮೆ ಪಾಲಿಸಿಗಳನ್ನು ಮಾರಾಟ ಮಾಡದಂತೆ ಭಾರತೀಯ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್ಡಿಎಐ) ನಿರ್ಬಂಧ ವಿಧಿಸಿದೆ.
ಕಂಪನಿಯ ಹಣಕಾಸು ಪರಿಸ್ಥಿತಿ ದುರ್ಬಲವಾಗಿರುವುದರಿಂದ ಈ ನಿರ್ಬಂಧ ವಿಧಿಸಲಾಗಿದೆ. ತನ್ನ ಹಣಕಾಸು ಸಂಪತ್ತು ಮತ್ತು ಪಾಲಿಸಿದಾರರಿಗೆ ಪಾವತಿಸಬೇಕಾದ ಮೊತ್ತವನ್ನು ರಿಲಯನ್ಸ್ ಜನರಲ್ ಇನ್ಶುರೆನ್ಸ್ ಕಂಪನಿಗೆ (ಆರ್ಜಿಐಸಿಎಲ್) ಪಾವತಿಸಬೇಕು. ಇದರಿಂದ ಹಾಲಿ ಪಾಲಿಸಿದಾರರ ವಿಮೆ ಪರಿಹಾರ ಕೋರಿಕೆಗಳನ್ನು ‘ಆರ್ಜಿಐಸಿಎಲ್’ ಇತ್ಯರ್ಥಪಡಿಸಲು ನೆರವಾಗಲಿದೆ ಎಂದು ಪ್ರಾಧಿಕಾರವು ತಿಳಿಸಿದೆ.
’ಆರ್ಎಚ್ಐಸಿಎಲ್’ನ ವಿಮೆ ಪರಿಹಾರ ನೀಡುವ ಸಾಮರ್ಥ್ಯವು ಗಮನಾರ್ಹವಾಗಿ ಕುಸಿತ ಕಂಡಿದೆ. ಹೀಗಾಗಿ ಸದ್ಯದ ಸಂದರ್ಭದಲ್ಲಿ ಕಂಪನಿಯು ಆರೋಗ್ಯ ವಿಮೆ ವಹಿವಾಟು ಮುಂದುವರೆಸುವುದರಿಂದ ಪಾಲಿಸಿದಾರರ ಹಿತಾಸಕ್ತಿಗೆ ಧಕ್ಕೆ ಒದಗಲಿದೆ.
ಪಾಲಿಸಿಗಳ ಮಾರಾಟ ಸ್ಥಗಿತಗೊಳಿಸಿರುವುದನ್ನು ಕಂಪನಿಯು ತನ್ನ ಅಂತರ್ಜಾಲ ತಾಣ ಮತ್ತು ಎಲ್ಲ ಶಾಖೆಗಳಲ್ಲಿ ಪ್ರದರ್ಶಿಸಬೇಕು ಎಂದು ಸೂಚಿಸಲಾಗಿದೆ.
ಪಾಲಿಸಿದಾರರ ಹಿತಾಸಕ್ತಿ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಿಮೆ ಪರಿಹಾರ ಕೋರಿಕೆಗಳನ್ನು ಇತ್ಯರ್ಥಪಡಿಸಲಾಗುವುದು ಎಂದೂ ಪ್ರಾಧಿಕಾರವು ಭರವಸೆ ನೀಡಿದೆ.
ಕಳೆದ ವರ್ಷದ ಅಕ್ಟೋಬರ್ನಲ್ಲಿ ಆರೋಗ್ಯ ವಿಮೆ ವಹಿವಾಟು ನಡೆಸಲು ಅನುಮತಿ ನೀಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.