ADVERTISEMENT

ದುರ್ಬಳಕೆಯಿಂದ ಸಾಲಗಾರರಿಗೆ ಸಂಕಟ: ಅಖಿಲ ಭಾರತ ಸಾಲಗಾರರ ಒಕ್ಕೂಟ

ಸಾಲಗಾರರ ಒಕ್ಕೂಟದ ಸುದ್ದಿಗೋಷ್ಠಿ * ಕಾನೂನು ತಿದ್ದುಪಡಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 14:50 IST
Last Updated 18 ಸೆಪ್ಟೆಂಬರ್ 2025, 14:50 IST
   

ಬೆಂಗಳೂರು: ದೇಶದಲ್ಲಿ ಬ್ಯಾಂಕ್‌ ಸೇರಿದಂತೆ ವಿವಿಧ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದವರ ಸಂಖ್ಯೆಯು 75 ಕೋಟಿಯಷ್ಟು ಇದ್ದು, ಅತಿಯಾದ ಬಡ್ಡಿ ದರ ಹಾಗೂ ಕಾನೂನಿನ ದುರ್ಬಳಕೆಯ ಕಾರಣದಿಂದಾಗಿ ಸಾಲ ಪಡೆದವರು ತೀವ್ರ ಯಾತನೆ ಅನುಭವಿಸುತ್ತಿದ್ದಾರೆ ಎಂದು ಅಖಿಲ ಭಾರತ ಸಾಲಗಾರರ ಒಕ್ಕೂಟ ಹೇಳಿದೆ.

ಬೆಂಗಳೂರಿನಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಒಕ್ಕೂಟದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯ ದಯಾನಂದ ರೆಡ್ಡಿ ಅವರು, ‘ಭಾರತ ಮತ್ತು ಚೀನಾದ ಜನಸಂಖ್ಯೆಯು ಸರಿಸುಮಾರು ಒಂದೇ ಆಗಿದ್ದರೂ ಚೀನಾದ ಜಿಡಿಪಿ ಗಾತ್ರವು ಭಾರತದ ಜಿಡಿಪಿ ಗಾತ್ರಕ್ಕೆ ಹೋಲಿಸಿದರೆ ಸರಿಸುಮಾರು ಐದು ಪಟ್ಟು ದೊಡ್ಡದಾಗಿದೆ. ಚೀನಾದಲ್ಲಿ ಉದ್ಯಮಿಗಳಿಗೆ ಶೇ 3.94ರ ಬಡ್ಡಿ ದರದಲ್ಲಿ ಸಾಲ ಸಿಗುತ್ತಿದೆ. ಭಾರತದಲ್ಲಿ ಗರಿಷ್ಠ ಶೇ 16ರವರೆಗೆ ಬಡ್ಡಿ ನೀಡಿ ಉದ್ಯಮಿಗಳು ಸಾಲ ಪಡೆಯಬೇಕಾಗಿದೆ. ದುಬಾರಿ ಬಡ್ಡಿ ದರವು ಭಾರತದ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗಿದೆ’ ಎಂದು ಹೇಳಿದರು.

ದೇಶದಲ್ಲಿ ರೆಪೊ ದರವು ಶೇ 5.5ರಷ್ಟು ಮಾತ್ರ ಇದ್ದರೂ ಬ್ಯಾಂಕ್‌ಗಳು ಅದಕ್ಕಿಂತ ಶೇ 10ರಷ್ಟು ಹೆಚ್ಚು ಬಡ್ಡಿ ವಸೂಲಿ ಮಾಡುತ್ತಿವೆ. ಈ ಪ್ರಮಾಣದ ಬಡ್ಡಿಯ ಹೊರೆಯನ್ನು ತಾಳಿಕೊಳ್ಳಲು ರೈತರಿಗೆ, ಉದ್ಯಮಿಗಳಿಗೆ ಸಾಧ್ಯವಾಗುತ್ತಿಲ್ಲ ಎಂದರು.

ADVERTISEMENT

ಹಣಕಾಸು ಸಂಸ್ಥೆಗಳು ಸರ್ಫೇಸಿ ಕಾಯ್ದೆ, ದಿವಾಳಿ ಸಂಹಿತೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಸಾಲ ವಸೂಲಾತಿಗೆ ಡಿಆರ್‌ಟಿ, ಎನ್‌ಸಿಎಲ್‌ಟಿ ನ್ಯಾಯಮಂಡಳಿಗಳಲ್ಲಿ ಒಂದಕ್ಕಿಂತ ಹೆಚ್ಚು ಪ್ರಕರಣಗಳನ್ನು ದಾಖಲಿಸಿ ಉದ್ಯಮಿಗಳ ಆಸ್ತಿ ಮೌಲ್ಯ ಕುಸಿಯುವಂತೆ ಮಾಡುತ್ತಿವೆ. ದಿವಾಳಿ ಸಂಹಿತೆಯು ಕಂಪನಿಗಳು ನೌಕರರಿಗೆ ನೀಡಬೇಕಿರುವ ವೇತನ, ಪಾವತಿಸಬೇಕಿರುವ ಪಿಎಫ್‌ ಮೊತ್ತಕ್ಕಿಂತ ಹೆಚ್ಚಿನ ಆದ್ಯತೆಯನ್ನು ಸಾಲ ಮರುಪಾವತಿಗೆ ನೀಡುತ್ತಿದೆ ಎಂದು ದೂರಿದರು.

ಸಾಲಗಾರರಿಗೆ ಸಾಲ ಮರುಪಾವತಿ ಮಾಡಲು ಯಾವುದೋ ಕಾರಣಕ್ಕೆ ಆಗದಿದ್ದಾಗ, ಅವರಿಗೆ ತುಸು ಕಾಲಾವಕಾಶ ನೀಡಬೇಕು. ಸಾಲಕ್ಕೆ ಅಡಮಾನವಾಗಿ ಇರಿಸಿದ ಆಸ್ತಿಯನ್ನು ತಾವೇ ಮಾರಾಟ ಮಾಡಿ, ಸಾಲದ ಮೊತ್ತ ಭರ್ತಿ ಮಾಡಲು ಅವಕಾಶ ಕಲ್ಪಿಸಬೇಕು, ಇದಕ್ಕೆ ಆರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಸಾಲದ ಕಂತನ್ನು ಕಟ್ಟಲು ಆಗದಿದ್ದಾಗ ನೆರವು ಯಾಚಿಸಿ ಕರೆ ಮಾಡಲು ಸಹಾಯವಾಣಿಯೊಂದನ್ನು ಆರಂಭಿಸುವ ಉದ್ದೇಶ ಒಕ್ಕೂಟಕ್ಕೆ ಇದೆ ಎಂದು ತಿಳಿಸಿದರು. ಸಾಲಗಾರರ ಸಮಸ್ಯೆ ಹಾಗೂ ಕಾನೂನಿನ ದುರ್ಬಳಕೆ ಬಗ್ಗೆ ಚರ್ಚಿಸಲು ಬೆಂಗಳೂರಿನ ಎಫ್‌ಕೆಸಿಸಿಐ ಕಚೇರಿಯಲ್ಲಿ ಸೆಪ್ಟೆಂಬರ್‌ 25ರಂದು ಸಭೆ ನಡೆಯಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.