ಕಮಿಷನ್ ಹೆಚ್ಚಳಕ್ಕೆ ಎಲ್ಪಿಜಿ ವಿತರಕರ ಗಡುವು
ಭೋಪಾಲ್: ಕೇಂದ್ರ ಸರ್ಕಾರವು ಮೂರು ತಿಂಗಳೊಳಗೆ ಕಮಿಷನ್ ಮೊತ್ತ ಹೆಚ್ಚಳ ಸೇರಿ ಎಲ್ಪಿಜಿ ವಿತರಕರ ವಿವಿಧ ಬೇಡಿಕೆ ಈಡೇರಿಸಬೇಕಿದೆ. ಇಲ್ಲವಾದರೆ ದೇಶದಾದ್ಯಂತ ಅನಿರ್ದಿಷ್ಟಾವಧಿವರೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಎಲ್ಪಿಜಿ ವಿತರಕರ ಸಂಘ ಗಡುವು ನೀಡಿದೆ.
ಭೋಪಾಲ್ನಲ್ಲಿ ಶನಿವಾರ ಸಂಘದ ಸಮಾವೇಶ ಆಯೋಜಿಸಲಾಗಿತ್ತು. ವಿವಿಧ ರಾಜ್ಯದ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸಮಾವೇಶದಲ್ಲಿ ಮಂಡಿಸಿದ ಹೋರಾಟದ ನಿರ್ಣಯಕ್ಕೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಂಘದ ಅಧ್ಯಕ್ಷ ಬಿ.ಎಸ್. ಶರ್ಮಾ ತಿಳಿಸಿದ್ದಾರೆ.
ವಿತರಕರ ಬೇಡಿಕೆ ಈಡೇರಿಸುವಂತೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ. ಪ್ರಸ್ತುತ ಕಡಿಮೆ ಕಮಿಷನ್ ನೀಡಲಾಗುತ್ತಿದೆ. ಇದರಿಂದ ಕಾರ್ಯಾಚರಣೆಯ ವೆಚ್ಚವನ್ನು ಸರಿದೂಗಿಸಲು ಆಗುವುದಿಲ್ಲ. ಕಮಿಷನ್ ಮೊತ್ತವನ್ನು ಕನಿಷ್ಠ ₹150ಕ್ಕೆ ಹೆಚ್ಚಿಸಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಎಲ್ಪಿಜಿ ಸಿಲಿಂಡರ್ ವಿತರಣೆಯು ಬೇಡಿಕೆ ಮತ್ತು ಪೂರೈಕೆ ಮೇಲೆ ನಿರ್ಧರಿತವಾಗಲಿದೆ. ಆದರೆ, ತೈಲ ಉತ್ಪಾದನಾ ಕಂಪನಿಗಳು ಬೇಡಿಕೆ ಇಲ್ಲದಿದ್ದರೂ ಗೃಹಬಳಕೆಯೇತರ ಸಿಲಿಂಡರ್ಗಳನ್ನು ವಿತರಕರಿಗೆ ರವಾನಿಸುತ್ತವೆ. ಇದು ನಿಯಮಾವಳಿಗೆ ವಿರುದ್ಧವಾಗಿದೆ. ಈ ಪದ್ಧತಿಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯ ಸಿಲಿಂಡರ್ ವಿತರಣೆಯಲ್ಲಿ ಹಲವು ಸಮಸ್ಯೆಗಳಿವೆ. ಇವುಗಳನ್ನು ಬಗೆಹರಿಸಬೇಕಿದೆ. ನಿಗದಿತ ಅವಧಿಯಲ್ಲಿ ಈ ಬೇಡಿಕೆಗಳನ್ನು ಈಡೇರಿಸಬೇಕಿದೆ. ಇಲ್ಲವಾದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.