ADVERTISEMENT

ಜಿಎಸ್‌ಟಿ: ತೆರಿಗೆ ಪ್ರಮಾಣ ಪರಿಶೀಲನೆ ಸಮಿತಿಗೆ ಬೊಮ್ಮಾಯಿ ನೇತೃತ್ವ

ಪಿಟಿಐ
Published 27 ಸೆಪ್ಟೆಂಬರ್ 2021, 14:17 IST
Last Updated 27 ಸೆಪ್ಟೆಂಬರ್ 2021, 14:17 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ವಿಧಿಸಲಾಗುತ್ತಿರುವ ತೆರಿಗೆ ಪ್ರಮಾಣ, ಜಿಎಸ್‌ಟಿಯಿಂದ ವಿನಾಯಿತಿ ಪಡೆದಿರುವ ಉತ್ಪನ್ನಗಳ ಬಗ್ಗೆ ಪರಿಶೀಲಿಸಲು ಹಾಗೂ ತೆರಿಗೆ ವಂಚನೆ ಮೂಲಗಳನ್ನು ಗುರುತಿಸಲು ಕೇಂದ್ರ ಹಣಕಾಸು ಸಚಿವಾಲಯವು ಎರಡು ಸಮಿತಿಗಳನ್ನು ರಚಿಸಿದೆ. ರಾಜ್ಯಗಳ ಹಣಕಾಸು ಸಚಿವರು ಈ ಸಮಿತಿಗಳಲ್ಲಿ ಇರಲಿದ್ದಾರೆ.

ತೆರಿಗೆ ಪ್ರಮಾಣದ ಬಗ್ಗೆ ಪರಿಶೀಲನೆ ನಡೆಸಲಿರುವ ಸಮಿತಿಗೆ, ರಾಜ್ಯದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧ್ಯಕ್ಷರಾಗಿರಲಿದ್ದಾರೆ. ಇದು ಎರಡು ತಿಂಗಳುಗಳಲ್ಲಿ ವರದಿ ಸಲ್ಲಿಸಬೇಕಿದೆ.

ಜಿಎಸ್‌ಟಿ ಜಾರಿಗೆ ಬಂದ ನಾಲ್ಕು ವರ್ಷಗಳ ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ‘ಸರಳ ತೆರಿಗೆ ಪ್ರಮಾಣ’ದ ಜಿಎಸ್‌ಟಿ ವ್ಯವಸ್ಥೆಯನ್ನು ರೂಪಿಸಲು ಮುಂದಡಿ ಇರಿಸಿವೆ. ಶೇಕಡ 12 ಹಾಗೂ ಶೇ 18ರ ತೆರಿಗೆ ಪ್ರಮಾಣವನ್ನು ಪರಸ್ಪರ ವಿಲೀನಗೊಳಿಸಬೇಕು ಎಂಬ ಬೇಡಿಕೆ ಇದೆ. ಅಲ್ಲದೆ, ವಿನಾಯಿತಿ ಪಟ್ಟಿಯಲ್ಲಿರುವ ಕೆಲವು ಉತ್ಪನ್ನ, ಸೇವೆಗಳನ್ನು ತೆರಿಗೆ ವ್ಯಾಪ್ತಿಗೆ ತರಬೇಕು ಎಂಬ ಆಗ್ರಹವೂ ಇದೆ.

ADVERTISEMENT

ಜಿಎಸ್‌ಟಿ ವ್ಯವಸ್ಥೆಯಲ್ಲಿ ಸುಧಾರಣೆಗೆ ರಚಿಸಿರುವ ಇನ್ನೊಂದು ಸಮಿತಿಯು, ತೆರಿಗೆ ವಂಚನೆ ಆಗಬಹುದಾದ ಮೂಲಗಳನ್ನು ಗುರುತಿಸಲಿದೆ. ವಹಿವಾಟು ಪ್ರಕ್ರಿಯೆ ಮತ್ತು ಐ.ಟಿ. ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತಂದು ಆದಾಯ ಸೋರಿಕೆ ತಡೆಯುವುದು ಹೇಗೆ ಎಂಬ ಬಗ್ಗೆ ಸಲಹೆ ನೀಡಲಿದೆ. ಈ ಸಮಿತಿಗೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಅಧ್ಯಕ್ಷರಾಗಿರಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.