ನವದೆಹಲಿ: ಕೇಂದ್ರ ಸರ್ಕಾರವು 2020ರಲ್ಲಿ ಆರಂಭಿಸಿದ ತುರ್ತು ಸಾಲ ಖಾತರಿ ಯೋಜನೆಯು (ಇಸಿಎಲ್ಜಿಎಸ್) 13.5 ಲಕ್ಷ ಉದ್ದಿಮೆಗಳು ದಿವಾಳಿ ಆಗದಂತೆ ತಡೆದಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ನ (ಎಸ್ಬಿಐ) ಸಂಶೋಧನಾ ವರದಿಯೊಂದು ಹೇಳಿದೆ.
ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ (ಎಂಎಸ್ಎಂಇ) ಉದ್ದಿಮೆಗಳಿಗೆ ನೆರವು ನೀಡುವ ಉದ್ದೇಶದಿಂದ ಆರಂಭಿಸಲಾದ ಈ ಯೋಜನೆಯು ಇಷ್ಟು ಉದ್ದಿಮೆಗಳನ್ನು ಕಾಪಾಡಿರುವುದರ ಪರಿಣಾಮವಾಗಿ ಒಟ್ಟು 1.5 ಕೋಟಿ ಉದ್ಯೋಗಗಳನ್ನು ರಕ್ಷಿಸಿದಂತೆ ಆಗಿದೆ ಎಂದೂ ಈ ವರದಿಯು ಹೇಳಿದೆ.
ಈ ಯೋಜನೆಯು ₹ 20 ಲಕ್ಷ ಕೋಟಿ ಮೊತ್ತದ ಆತ್ಮನಿರ್ಭರ ಭಾರತ ಯೋಜನೆಯ ಒಂದು ಭಾಗ. ಕೋವಿಡ್–19 ಹರಡುವುದನ್ನು ತಡೆಯುವ ಉದ್ದೇಶದಿಂದ ಜಾರಿಗೆ ತಂದ ಲಾಕ್ಡೌನ್ನ ಕೆಟ್ಟ ಪರಿಣಾಮಗಳನ್ನು ನಿಭಾಯಿಸುವ ಉದ್ದೇಶದಿಂದ ಸಾಲ ಖಾತರಿ ಯೋಜನೆಯನ್ನು ಪ್ರಕಟಿಸಲಾಯಿತು.
‘ಒಟ್ಟು ₹ 1.8 ಲಕ್ಷ ಕೋಟಿ ಮೊತ್ತದ ಸಾಲಗಳು ಎನ್ಪಿಎ ಆಗಿ ವರ್ಗೀಕರಣ ಆಗುವುದನ್ನು ಈ ಯೋಜನೆಯು ತಪ್ಪಿಸಿದೆ ಎಂದು ವರದಿಯು ಹೇಳಿದೆ. ಇಷ್ಟು ಸಾಲವು ಎನ್ಪಿಎ ಆಗಿ ಪರಿವರ್ತನೆ ಆಗಿದ್ದಿದ್ದರೆ 1.5 ಕೋಟಿ ಕಾರ್ಮಿಕರು ಕೆಲಸ ಕಳೆದುಕೊಳ್ಳಬೇಕಾಗುತ್ತಿತ್ತು. ಹಾಗಾಗಿ, ಸಾಲ ಖಾತರಿ ಯೋಜನೆಯು ಒಟ್ಟು ಆರು ಕೋಟಿ ಜನರ (ಒಬ್ಬ ಕಾರ್ಮಿಕ ತನ್ನನ್ನೂ ಸೇರಿದಂತೆ ನಾಲ್ಕು ಜನರನ್ನು ಸಲಹುತ್ತಾನೆ ಎಂದು ಭಾವಿಸಲಾಗಿದೆ) ಜೀವನೋಪಾಯವನ್ನು ಕಾಪಾಡಿದೆ ಎಂದು ಅದು ಹೇಳಿದೆ.
ಸಾಲ ಖಾತರಿ ಯೋಜನೆಯ ಅತಿಹೆಚ್ಚಿನ ಪ್ರಯೋಜನವನ್ನು ಗುಜರಾತ್ ರಾಜ್ಯ ಪಡೆದುಕೊಂಡಿದೆ. ಪ್ರಯೋಜನ ಪಡೆದಿರುವ ರಾಜ್ಯಗಳ ಸಾಲಿನಲ್ಲಿ ಮಹಾರಾಷ್ಟ್ರ, ತಮಿಳುನಾಡು ಮತ್ತು ಉತ್ತರ ಪ್ರದೇಶ ನಂತರದ ಸ್ಥಾನಗಳಲ್ಲಿ ಇವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.