ಲಖನೌ: ಕೋವಿಡ್–19 ಸಾಂಕ್ರಾಮಿಕದಿಂದಾಗಿ ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆ (ಎಂಎಸ್ಎಂಇ) ವಲಯವು ಹೆಚ್ಚಿನ ಹಾನಿ ಅನುಭವಿಸಿದೆ. ಹಾಗಾಗಿ ಈ ವಲಯಕ್ಕೆ ಪರಿಹಾರದ ಪ್ಯಾಕೇಜ್ ನೀಡುವಂತೆ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘವು (ಅಸೋಚಾಂ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಪರಿಹಾರ ಪ್ಯಾಕೇಜ್ನ ಅವಶ್ಯಕತೆ ಇದೆ. ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಕೆಲವು ಯೋಜನೆ ರೂಪಿಸಬೇಕಿದೆ. ಇದರಿಂದಾಗಿ ನಾವು ಹೆಚ್ಚು ಅಗತ್ಯ ಇರುವವರಿಗೆ ಕೇಂದ್ರೀಕೃತ ಮತ್ತು ಸರಿಯಾದ ಪರಿಹಾರವನ್ನು ನೀಡಬಹುದಾಗಿದೆ ಎಂದು ಅಸೋಚಾಂ ಅಧ್ಯಕ್ಷ ವಿನೀತ್ ಅಗರ್ವಾಲ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಮುಂದೆ ಕೆಲವು ಸಲಹೆಗಳನ್ನೂ ಅವರು ಇಟ್ಟಿದ್ದಾರೆ.
* ಬ್ಯಾಂಕುಗಳು ಎಂಎಸ್ಎಂಇಗಳಿಗೆ ನೀಡುವ ದುಡಿಯುವ ಬಂಡವಾಳದ ಪ್ರಮಾಣವನ್ನು ಶೇಕಡ 20ರಷ್ಟು ಹೆಚ್ಚಿಸಬೇಕು. ಆದರೆ ಇದಕ್ಕೆ ಯಾವುದೇ ಹೆಚ್ಚುವರಿ ಮೇಲಾಧಾರ ವಿಧಿಸಬಾರದು.
* ಎಂಎಸ್ಎಂಇಗಳ ವಸೂಲಾಗದ ಸಾಲದ (ಎನ್ಪಿಎ) ಮರು ವರ್ಗೀಕರಣ ಆಗಬೇಕು.
* ಬೀದಿ ಬದಿ ವ್ಯಾಪಾರಿಗಳು, ಸಣ್ಣ ಅಂಗಡಿ ನಡೆಸುವವರಿಗೂ ಕೆಲವು ಪರಿಹಾರ ಘೋಷಿಸಬೇಕು. ದುಡಿಯುವ ಬಂಡವಾಳದ ಸಾಲ ಹಾಗೂ ನೇರ ಪ್ರಯೋಜನಗಳನ್ನು ನೀಡಬೇಕು.
* ಕಳೆದ ಬಾರಿ ಗ್ರಾಮೀಣ ಭಾಗಕ್ಕೆ ಕೆಲವೊಂದು ಪರಿಹಾರ ಘೋಷಿಸಲಾಗಿತ್ತು. ಈ ಬಾರಿಯೂ ಅದೇ ರೀತಿಯ ಕೊಡುಗೆ ಘೊಷಿಸಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.