ಬೆಂಗಳೂರು: ‘ವಾಹನಗಳಿಂದ ವಿಷಕಾರಿ ಅನಿಲ ಹೊರಸೂಸುವುದನ್ನು ಕಡಿಮೆ ಮಾಡಲು ನಾವು ವಿದ್ಯುತ್ ಚಾಲಿತ ವಾಹನಗಳ ಮೊರೆಹೋಗಬೇಕಿದೆ. ವಿದ್ಯುತ್ ಚಾಲಿತ ವಾಹನಗಳನ್ನು ಜನಸ್ನೇಹಿಯಾಗಿಸಲು ಹೊಸ ಸಂಶೋಧನೆಗಳು ಆಗಬೇಕಿದೆ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಆರ್. ಶೆಟ್ಟಿ ಹೇಳಿದರು.
ನಗರದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಶಕ್ತಿಇವಾಹ್ – ವಿದ್ಯುತ್ ವಾಹನಗಳ ಸಾಮರ್ಥ್ಯವರ್ಧನೆ’ ಕುರಿತ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
‘2030ರ ಹೊತ್ತಿಗೆ ದೇಶದಲ್ಲಿ ಮಾರಾಟವಾಗುವ ಹೊಸ ವಾಹನಗಳ ಒಟ್ಟು ಪ್ರಮಾಣದಲ್ಲಿ ಶೇಕಡ 30ರಷ್ಟು ಇ.ವಿ.ಗಳು ಇರಬೇಕು ಎಂಬ ಬಯಕೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ಆದರೆ, ಇ.ವಿ. ತಯಾರಿಕೆಗೆ ಬೇಕಿರುವ ಆಮದು ಉಪಕರಣಗಳ ಬೆಲೆ ದುಬಾರಿ ಆಗಿದೆ. ಈ ಸಮಸ್ಯೆ ಪರಿಹರಿಸಲು ಸ್ಥಳೀಯ ಉತ್ಪಾದಕರಿಗೆ ಪ್ರೋತ್ಸಾಹ ಬೇಕು’ ಎಂದು ಹೇಳಿದರು.
ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ ಉಪಾಧ್ಯಕ್ಷ ಡಾ. ಶಂಕರ್ ವೇಣುಗೋಪಾಲ್, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಚ್.ಸಿ. ನಾಗರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.