ADVERTISEMENT

ನಬಾರ್ಡ್‌: ಆದ್ಯತಾ ಸಾಲ ಪತ್ರ ಬಿಡುಗಡೆ

2022 - 23ನೇ ಸಾಲಿಗೆ ₹3.32 ಲಕ್ಷ ಕೋಟಿ ನಿಗದಿ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 17:24 IST
Last Updated 12 ಜನವರಿ 2022, 17:24 IST

ಬೆಂಗಳೂರು: 2022–23ನೇ ಸಾಲಿಗೆ ರಾಜ್ಯದ ಆದ್ಯತಾ ವಲಯದ ಸಾಲದ ಪ್ರಮಾಣವನ್ನು ₹ 3.32 ಲಕ್ಷ ಕೋಟಿಗೆ ನಿಗದಿಪಡಿಸಲಾಗಿದೆ. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ನ (ನಬಾರ್ಡ್‌) ಕರ್ನಾಟಕ ಪ್ರಾದೇಶಿಕ ಕಚೇರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಆದ್ಯತಾ ವಲಯಗಳಿಗೆ ಅಗತ್ಯವಿರುವ ಹಣಕಾಸು ನೆರವಿನ ಕುರಿತ ಆದ್ಯತಾ ಪತ್ರವನ್ನು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ವಂದಿತ ಶರ್ಮ ಬಿಡುಗಡೆ ಮಾಡಿದರು.

ಒಟ್ಟಾರೆ ಮೊತ್ತದಲ್ಲಿ ಕೃಷಿ ವಲಯ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ₹ 1.61 ಲಕ್ಷ ಕೋಟಿ, ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ₹ 1.28 ಲಕ್ಷ ಕೋಟಿ ಸಾಲ ನಿಗದಿಪಡಿಸಲಾಗಿದೆ.

‘ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ಸರ್ಕಾರದ ಇಲಾಖೆಗಳ ಸಮನ್ವಯದ ಪ್ರಯತ್ನಗಳಿಂದ ರೈತ ಉತ್ಪಾದಕ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಉತ್ತಮ ಬದಲಾವಣೆ ಕಾಣುವ ಮತ್ತು ಕೃಷಿ ಉತ್ಪನ್ನಗಳ ಮೌಲ್ಯವೃದ್ಧಿಸುವ ವಿಶ್ವಾಸ ಇದೆ’ ಎಂದು ವಂದಿತ ಶರ್ಮಾ ಹೇಳಿದರು.

ADVERTISEMENT

‘ಬ್ಯಾಂಕುಗಳ ಸಾಲ ನೀಡಿಕೆಗೆ ಬೆಂಬಲ ನೀಡುವಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ’ ಎಂದು ನಬಾರ್ಡ್‌ನ ಮುಖ್ಯ ಮಹಾ ವ್ಯವಸ್ಥಾಪಕ ನೀರಜ್‌ ಕುಮಾರ್ ವರ್ಮಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.