ಬೆಂಗಳೂರು: ‘ಚಿನ್ನಾಭರಣಗಳಿಗೆ ಹಾಲ್ಮಾರ್ಕ್ ಕಡ್ಡಾಯ ಮಾಡಿರುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಎಚ್ಯುಐಡಿಯಿಂದಾಗಿ (ಹಾಲ್ಮಾರ್ಕಿಂಗ್ ಯೂನಿಕ್ ಐಡಿ) ತೊಂದರೆ ಆಗುತ್ತಿದೆ. ಹಾಗಾಗಿ ಅದನ್ನು ಕೈಬಿಡುವಂತೆ ಪ್ರತಿಭಟನೆ ನಡೆಸಲಾಗಿದೆ’ ಎಂದು ಬೆಂಗಳೂರು ಚಿನ್ನಾಭರಣ ವರ್ತಕರ ಸಂಘದ ಅಧ್ಯಕ್ಷ ವಿದ್ಯಾಸಾಗರ್ ಹೇಳಿದರು.
‘ಪ್ರತಿ ಆಭರಣಕ್ಕೆ ಆರು ಸಂಖ್ಯೆಗಳ ಒಂದು ಎಚ್ಯುಐಡಿ ನೀಡಲಾಗುತ್ತದೆ. ಆದರೆ, ಒಂದಕ್ಕಿಂತ ಹೆಚ್ಚು ಆಭರಣಗಳಿಗೆ ಒಂದೇ ಎಚ್ಯುಐಡಿ ಬರುತ್ತಿದೆ. ಇದು ಬಹುದೊಡ್ಡ ಸಮಸ್ಯೆ ಆಗಿದೆ. ವಿನ್ಯಾಸದಲ್ಲಿ ಬದಲಾವಣೆ ಮಾಡಬೇಕು ಎಂದಾದರೆ ಆಗ ಇನ್ನೊಂದು ಎಚ್ಯುಐಡಿ ಹಾಕಲು ಆಗುವುದಿಲ್ಲ. ವ್ಯಾಪಾರದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಎಚ್ಯುಐಡಿ ನೆರವಾಗುತ್ತದೆ. ಆದರೆ, ಈ ವ್ಯವಸ್ಥೆಯಿಂದ ವ್ಯಾಪಾರಿಗಳಿಗೆ ಹೆಚ್ಚು ಸಮಸ್ಯೆ ಆಗುತ್ತಿದೆ’ ಎಂದರು.
ಉತ್ತಮ ಸ್ಪಂದನೆ: (ನವದೆಹಲಿ/ಪಿಟಿಐ ವರದಿ): ಕೇಂದ್ರ ಸರ್ಕಾರವು ಆಭರಣಗಳ ಮೇಲೆ ಹಾಲ್ಮಾರ್ಕಿಂಗ್ ಯೂನಿಕ್ ಐಡಿ (ಎಚ್ಯುಐಡಿ) ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿ ಸೋಮವಾರ ನಡೆಸಿದ ಸಾಂಕೇತಿಕ ಪ್ರತಿಭಟನೆಗೆ ದೇಶದಾದ್ಯಂತ ಉತ್ತಮ ಸ್ಪಂದನೆ ದೊರೆಯಿತು ಎಂದು ಹರಳು ಮತ್ತು ಚಿನ್ನಾಭರಣ ಮಂಡಳಿಯು (ಜಿಜೆಸಿ) ಹೇಳಿದೆ.
ದೊಡ್ಡ ಚಿನ್ನಾಭರಣ ಕಂಪನಿಗಳನ್ನು ಹೊರತುಪಡಿಸಿ, ಇತರ ಬಹುತೇಕ ಮಳಿಗೆಗಳು ಬಾಗಿಲು ಮುಚ್ಚಿದ್ದವು ಎಂದು ಅದು ತಿಳಿಸಿದೆ. ಚಿನ್ನದ ಪರಿಶುದ್ಧತೆಗೂ ಎಚ್ಯುಐಡಿಗೂ ಸಂಬಂಧವೇ ಇಲ್ಲ. ಚಿನ್ನವನ್ನು ಯಾರಿಗೆ ನೀಡಲಾಗಿದೆ ಎನ್ನುವುದನ್ನು ತಿಳಿಸುವ ಕಾರ್ಯವಿಧಾನ ಅದಾಗಿದೆ ಎಂದುಜಿಜೆಸಿ ಹೇಳಿದೆ.
ಯಾವುದೇ ಪರಿಣಾಮ ಬೀರದು: ಆಭರಣ ವ್ಯಾಪಾರಿಗಳ ಅತ್ಯಂತ ಸಣ್ಣ ಗುಂಪು ಪ್ರತಿಭಟನೆ ನಡೆಸುವುದರಿಂದ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯವು ಪ್ರಟಕಣೆಯಲ್ಲಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.