ಮುಂಬೈ (ಪಿಟಿಐ): ವಸೂಲಾಗದ ಸಾಲದ (ಎನ್ಪಿಎ) ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಂಬಂಧ ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ.
ಈ ಹಿಂದಿನ ಸುತ್ತೋಲೆಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಹೊಸ ಮಾರ್ಗದರ್ಶಿ ಸೂತ್ರಗಳಿಂದಾಗಿ ಈ ಹಿಂದಿನ ಸಾಲ ವಸೂಲಾತಿ ಪ್ರಕ್ರಿಯೆಗಳೆಲ್ಲ ರದ್ದಾಗಲಿವೆ.
ವಸೂಲಾಗದ ಸಾಲಗಳ ಪುನಶ್ಚೇತನ ಕ್ರಮ, ಕಾರ್ಪೊರೇಟ್ ಸಾಲಗಳ ಪುನರ್ ಹೊಂದಾಣಿಕೆ ಯೋಜನೆ, ದೀರ್ಘಾವಧಿ ಯೋಜನೆ ಸಾಲಗಳ ಮರು ಹೊಂದಾಣಿಕೆಯಂತಹ ಕ್ರಮಗಳನ್ನು ತಕ್ಷಣದಿಂದಲೇ ಜಾರಿಯಾಗುವಂತೆ ಕೈಬಿಡಲಾಗಿದೆ.
ಹೊಸ ಸುತ್ತೋಲೆ ಅನ್ವಯ, ‘ಎನ್ಪಿಎ’ ಖಾತೆಗಳನ್ನು ಮುಂಚಿತವಾಗಿಯೇ ಗುರುತಿಸುವ, ವರದಿ ಮಾಡುವ ಮತ್ತು ಕಾಲ ಮಿತಿ
ಯೊಳಗೆ ಪರಿಹಾರ ಕಂಡುಕೊಳ್ಳಲು ನಿಯಮಗಳನ್ನು ರೂಪಿಸಲಾಗಿದೆ.
ಬ್ಯಾಂಕ್ಗಳು ಸಾಲದ ಖಾತೆಯಲ್ಲಿನ ಮರುಪಾವತಿ ಮಾಡದ ಸಮಸ್ಯೆಯನ್ನು ಆರಂಭದಲ್ಲಿಯೇ ಗುರುತಿಸಬೇಕು. ಇಂತಹ ಸಾಲ ಖಾತೆಗಳನ್ನು ವಿಶೇಷ ಉಲ್ಲೇಖದ ಖಾತೆಗಳಾಗಿ (ಎಸ್ಎಂಎ) ವರ್ಗೀಕರಿಸಬೇಕು. ಸಾಕಷ್ಟು ಮುಂಚಿತವಾಗಿಯೇ ಪರಿಹಾರ ಯೋಜನೆಗೆ ಚಾಲನೆ ನೀಡಬೇಕು ಎಂದು ಸೂಚಿಸಲಾಗಿದೆ. ಸಾಲಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಬ್ಯಾಂಕ್ಗಳಿಗೆ ಯಾವುದೇ ನಿರ್ಬಂಧ ಇಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ.
ದೊಡ್ಡ ಕಂಪನಿಗಳು ಸಾಲ ಮರುಪಾವತಿಗೆ ಒಂದು ದಿನ ತಡ ಮಾಡಿದರೆ ಅಂತಹ ಖಾತೆಗಳನ್ನು ಸುಸ್ತಿ ಸಾಲ ಎಂದು ವರ್ಗೀಕರಿಸಿ 180 ದಿನಗಳಲ್ಲಿ ಪರಿಹಾರ ಕಂಡುಕೊಳ್ಳಲು ಮತ್ತು ದಿವಾಳಿ ಸಂಹಿತೆಯಡಿ ಸಾಲ ವಸೂಲಾತಿಗೆ ಕ್ರಮ ಕೈಗೊಳ್ಳಲು ಈ ಹಿಂದಿನ ಸುತ್ತೋಲೆ ಅವಕಾಶ ಕಲ್ಪಿಸಿತ್ತು. ₹ 2 ಸಾವಿರ ಕೋಟಿಗಿಂತ ಹೆಚ್ಚಿನ ಸುಸ್ತಿಸಾಲದ ಪ್ರಕರಣಗಳಲ್ಲಿ 180 ದಿನಗಳಲ್ಲಿ ಪರಿಹಾರ ಕಂಡುಕೊಳ್ಳದಿದ್ದರೆ, ಅಂತಹ ಸಾಲದ ಖಾತೆಗಳನ್ನು ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿಗೆ ಇಲ್ಲವೆ ದಿವಾಳಿ ಕೋರ್ಟ್ಗೆ ಕಡ್ಡಾಯವಾಗಿ ಶಿಫಾರಸು ಮಾಡಬೇಕಾಗಿತ್ತು. ಇದು ‘ಫೆಬ್ರುವರಿ 12ರ ಸುತ್ತೋಲೆ’ ಎಂದೇ ಜನಪ್ರಿಯವಾಗಿತ್ತು. ಈ ಕಠಿಣ ಸ್ವರೂಪದ ಸುತ್ತೋಲೆಯನ್ನು ಸುಪ್ರೀಂಕೋರ್ಟ್ ಏಪ್ರಿಲ್ 2ರಂದು ರದ್ದುಪಡಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.