ಹುಬ್ಬಳ್ಳಿ: ಉಳ್ಳಾಗಡ್ಡಿ, ಟೊಮೆಟೊ, ತರಕಾರಿಗಳ ಬೆಲೆ ಏರುಮುಖವಾಗಿದ್ದು, ಉಳ್ಳಾಗಡ್ಡಿಯ ಬೆಲೆ ಅರ್ಧ ಶತಕದ ಗಡಿ ದಾಟಿದೆ.
ಮುಂಬೈ ಕರ್ನಾಟಕ ಭಾಗದಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ಉಳ್ಳಾಗಡ್ಡಿ, ಟೊಮೆಟೊ ಬೆಳೆ ಹಾಳಾಗುತ್ತಿದ್ದು, ಹುಬ್ಬಳ್ಳಿಯ ಎಪಿಎಂಸಿ ಮಾರುಕಟ್ಟೆಗೆ ಆವಕ ಕಡಿಮೆಯಾಗಿದೆ. ಪರಿಣಾಮ ಬೆಲೆಯಲ್ಲಿ ತೀವ್ರವಾಗಿ ಏರಿಕೆಯಾಗುತ್ತಿದೆ.
ಹದಿನೈದು ದಿನಗಳ ಹಿಂದಷ್ಟೇ ಪ್ರತಿ ಕೆಜಿಗೆ ₹20ಕ್ಕೆ ಮಾರಾಟವಾಗುತ್ತಿದ್ದ ಉಳ್ಳಾಗಡ್ಡಿ, ಈಗ ಪ್ರತಿ ಕೆಜಿಗೆ ₹55 ರಿಂದ ₹65ಕ್ಕೆ ಮಾರಾಟವಾಗುತ್ತಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿಯೂ ಕ್ವಿಂಟಲ್ ಉಳ್ಳಾಗಡ್ಡಿಯ ಬೆಲೆ ₹ 3,200 ರಿಂದ ₹ 5,000ರವರೆಗೆ ಇದೆ.
ಸಣ್ಣ ಗಡ್ಡೆಗಳು ಪ್ರತಿ ಕ್ವಿಂಟಲ್ಗೆ ₹ 2,100 ರಿಂದ 3,500ರವರೆಗೆ, ದೊಡ್ಡ ಗಡ್ಡೆಗಳು ₹ 4,200ರ ಮೇಲೆಯೇ ಮಾರಾಟವಾಗುತ್ತಿವೆ. ಕೊರೊನಾ ಸೋಂಕಿನ ಹೆಚ್ಚಳದಿಂದಾಗಿ ಮಹಾರಾಷ್ಟ್ರದಿಂದ ಬರುತ್ತಿದ್ದ ಉಳ್ಳಾಗಡ್ಡಿಯ ಪ್ರಮಾಣದಲ್ಲಿಯೂ ಕಡಿಮೆಯಾಗಿದೆ.
‘ತೇವಾಂಶ ಹೆಚ್ಚಾಗಿರುವುದರಿಂದ ಸಂರಕ್ಷಿಸಿದ್ದ ಉಳ್ಳಾಗಡ್ಡಿಯೂ ಸಹ ಹಾಳಾಗುತ್ತಿದೆ. ಹೊಲದಲ್ಲಿರುವ ಬೆಳೆಯೂ ನೀರಿನಲ್ಲಿಯೇ ಕೊಳೆಯುತ್ತಿದೆ. ಹಾಗಾಗಿ ಬೆಲೆಯಲ್ಲಿ ಏರಿಕೆಯಾಗಿದೆ’ ಎನ್ನುತ್ತಾರೆ ಹುಬ್ಬಳ್ಳಿ ಎಪಿಎಂಸಿ ಉಳ್ಳಾಗಡ್ಡಿ ವ್ಯಾಪಾರಿ ಸಲೀಂ ಬ್ಯಾಹಟ್ಟಿ.
ಪ್ರತಿ ಕೆಜಿಗೆ ₹20 ರಿಂದ 30ಕ್ಕೆ ಮಾರಾಟವಾಗುತ್ತಿದ್ದ ಟೊಮೆಟೊ ಬೆಲೆಯು ₹40 ರಿಂದ 50ಕ್ಕೆ ಏರಿಕೆಯಾಗಿದೆ. ಹುಬ್ಬಳ್ಳಿ ಎಪಿಎಂಸಿಗೆ ಬೆಳಗಾವಿ, ಹಾವೇರಿ ಹಾಗೂ ಕೊಪ್ಪಳ ಜಿಲ್ಲೆಗಳಿಂದ ನಿತ್ಯ ಸಾವಿರಾರು ಕ್ರೇಟ್ (ಒಂದು ಕ್ರೇಟ್ 25 ಕೆಜಿ)ಗಳಲ್ಲಿ ಟೊಮೆಟೊ ಆವಕವಾಗುತ್ತಿತ್ತು. ಮಳೆ ಹೆಚ್ಚಾಗಿರುವುದರಿಂದ ಅರ್ಧದಷ್ಟೂ ಬರುತ್ತಿಲ್ಲ. ಎಪಿಎಂಸಿಯಲ್ಲಿ ಸಗಟು ದರ ಸಣ್ಣ ಟೊಮೆಟೊ ಕ್ರೇಟ್ಗೆ ₹ 550ರಿಂದ ₹ 600, ದೊಡ್ಡ ಟೊಮೆಟೊ ₹700ರಿಂದ ₹ 800ಕ್ಕೆ ಮಾರಾಟವಾಗುತ್ತಿದೆ ಎಂದು ಎಪಿಎಂಸಿ ವ್ಯಾಪಾರಿ ಎಂ.ಎನ್. ಹೆಬ್ಬಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.
ತರಕಾರಿಗಳ ಬೆಲೆಯಲ್ಲೂ ಹೆಚ್ಚಳ:ಸತತ ಮಳೆಯಿಂದಾಗಿ ತರಕಾರಿ, ಸೊಪ್ಪಿನ ಬೆಳೆಗಳೂ ಸಹ ಹಾಳಾಗಿದ್ದು, ಅವುಗಳ ಬೆಲೆಯಲ್ಲಿ ತೀವ್ರ ಏರಿಕೆಯಾಗಿದೆ. ಬಹುತೇಕ ತರಕಾರಿಗಳ ಬೆಲೆಯು ₹50 ದಾಟಿದೆ. ಪ್ರತಿ ಸೊಪ್ಪಿನ ಸೂಡು (ಕಟ್ಟು) ₹10 ರಿಂದ 20ರವರೆಗೆ ಮಾರಾಟವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.