ನವದೆಹಲಿ:ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಸತತ ಏಳನೇ ದಿನವೂಪೆಟ್ರೋಲ್, ಡೀಸೆಲ್ ದರದಲ್ಲಿ ಏರಿಕೆ ಮಾಡಿವೆ.
ಜೂನ್ 7 ರಿಂದ 13ರವರೆಗೆಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹ 3.82ರಂತೆ ಹೆಚ್ಚಾಗಿ ₹ 77.59ಕ್ಕೆ ಹಾಗೂ ಡೀಸೆಲ್ ದರ ₹ 3.88 ರಂತೆ ಹೆಚ್ಚಾಗಿ ₹69.78ಕ್ಕೆ ಏರಿಕೆಯಾಗಿದೆ.ಸ್ಥಳೀಯ ಮಾರಾಟ ತೆರಿಗೆ ಇಲ್ಲವೆ ‘ವ್ಯಾಟ್’ನಿಂದಾಗಿ ಮಾರಾಟ ದರ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸಗೊಳ್ಳುತ್ತದೆ.
ದೇಶದಾದ್ಯಂತಶನಿವಾರ ಪ್ರತಿಲೀಟರ್ ಪೆಟ್ರೋಲ್ ದರ 61 ಪೈಸೆ ಮತ್ತು ಡೀಸೆಲ್ ದರ 56 ಪೈಸೆ ಹೆಚ್ಚಿಸಲಾಗಿದೆ.ಮಾರ್ಚ್ ತಿಂಗಳ ಮಧ್ಯಭಾಗದಿಂದ ಇಂಧನ ದರ ಏರಿಕೆಯನ್ನು ನಿಲ್ಲಿಸಲಾಗಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರದಲ್ಲಿ ಆಗಿದ್ದ ಇಳಿಕೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಎಕ್ಸೈಸ್ ಸುಂಕ ಹೆಚ್ಚಿಸಿದ್ದು, ಅದನ್ನು ಗ್ರಾಹಕರಿಗೆ ವರ್ಗಾಯಿಸಿರಲಿಲ್ಲ. ಕಂಪನಿಗಳು ಅದನ್ನು ಭರಿಸಬೇಕಿತ್ತು. ಆದರೆ, ಇದೀಗ ಕಂಪನಿಗಳು ದಿನದಿಂದ ದಿನಕ್ಕೆ ಇಂಧನ ದರದಲ್ಲಿ ಏರಿಕೆ ಮಾಡಲಾರಂಭಿಸಿವೆ.
ಕಾಂಗ್ರೆಸ್ ಟೀಕೆ: ಪೆಟ್ರೋಲ್, ಡೀಸೆಲ್ ಮೇಲೆ ಗರಿಷ್ಠ ತೆರಿಗೆ ವಿಧಿಸುವ ಮೂಲಕ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಹೆಚ್ಚಿನ ಹೊರೆ ಬೀಳುವಂತೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
‘ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ದರ 15 ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದರೂ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಲೇ ಇದೆ. ಮೋದಿ ಆಳ್ವಿಕೆಯಲ್ಲಿ ಜನಸಾಮಾನ್ಯರು ನಿರಂತರವಾಗಿ ನರಳುವಂತಾಗಿದೆ’ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ.
‘ಕಚ್ಚಾತೈಲ ದರ ಕುಸಿತದ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವ ಬದಲಾಗಿ ಸತತ ಏಳನೇ ದಿನವೂ ದರ ಹೆಚ್ಚಿಸಲಾಗಿದೆ.
‘ಆರು ದಿನಗಳಲ್ಲಿ ದರ ಏರಿಕೆ ಮಾಡುವ ಮೂಲಕ ಸರ್ಕಾರ ₹44 ಸಾವಿರ ಕೋಟಿ ಗಳಿಸಿಕೊಂಡಿದೆ. ಮಾರ್ಚ್ 5ರಿಂದ ಸರ್ಕಾರ ₹ 2.5 ಲಕ್ಷ ಕೋಟಿ ಗಳಿಸಿಕೊಂಡಿದೆ. ಕಂಪನಿಗಳು ಮತ್ತು ಸರ್ಕಾರಕ್ಕೆ ಅನುಕೂಲ ಮಾಡಿಕೊಡುವ ಬದಲಾಗಿ ಇಂಧನ ದರ ಇಳಿಸುವ ಮೂಲಕ ಪ್ರಧಾನಿ ಅವರು ಜನರಿಗೆ ಸಹಾಯ ಮಾಡಿಕೊಡಬಹುದಿತ್ತು’ ಎಂದು ಆನ್ಲೈನ್ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.