ಪ್ರಧಾನಿ ನರೇಂದ್ರ ಮೋದಿ
(ಸಂಗ್ರಹ ಚಿತ್ರ)
ನವದೆಹಲಿ: ‘ದ್ವಿದಳ ಧಾನ್ಯ ಮಿಷನ್’ ಮತ್ತು ‘ಪ್ರಧಾನ ಮಂತ್ರಿ ಧನ ಧಾನ್ಯ ಕೃಷಿ ಯೋಜನೆ’ಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನವದೆಹಲಿಯಲ್ಲಿ ಚಾಲನೆ ನೀಡಲಿದ್ದಾರೆ.
ಧಾನ್ಯಗಳ ಉತ್ಪಾದನೆಯಲ್ಲಿ ದೇಶವು ಸ್ವಾವಲಂಬನೆ ಸಾಧಿಸುವಂತೆ ಮಾಡುವ ಗುರಿಯನ್ನು ಈ ಯೋಜನೆಗಳು ಹೊಂದಿವೆ.
ಈ ಎರಡು ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟವು ಈಗಾಗಲೇ ಅನುಮೋದನೆ ನೀಡಿದೆ. ಮುಂದಿನ ಹಿಂಗಾರು ಹಂಗಾಮಿನಿಂದ ಈ ಯೋಜನೆ ಅನುಷ್ಠಾನಗೊಳ್ಳಲಿದೆ. 2030-31ರವರೆಗೆ ಜಾರಿಯಲ್ಲಿ ಇರಲಿವೆ.
ಇದೇ ವೇಳೆ ಮೀನುಗಾರಿಕೆ, ಜಾನುವಾರು, ಆಹಾರ ಸಂಸ್ಕರಣೆ ಸೇರಿದಂತೆ ಇತರ ಕ್ಷೇತ್ರಗಳಿಗೆ ಸಂಬಂಧಿಸಿದ ₹3,681 ಕೋಟಿ ಮೌಲ್ಯದ ಯೋಜನೆಗಳನ್ನೂ ಮೋದಿ ಅವರು ಆರಂಭಿಸಲಿದ್ದಾರೆ. ರೈತರೊಂದಿಗೆ ಮೋದಿ ಅವರು ಮಾತುಕತೆ ನಡೆಸಲಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್, ‘ಗೋಧಿ ಮತ್ತು ಅಕ್ಕಿ ಉತ್ಪಾದನೆಯಲ್ಲಿ ದೇಶ ಸ್ವಾವಲಂಬನೆ ಸಾಧಿಸಿದೆ. ಧಾನ್ಯಗಳು, ಎಣ್ಣೆಕಾಳುಗಳು ವಿಷಯದಲ್ಲಿಯೂ ಸ್ವಾವಲಂಬನೆ ಸಾಧಿಸಬೇಕಿದೆ’ ಎಂದು ಹೇಳಿದ್ದಾರೆ.
ದ್ವಿದಳ ಧಾನ್ಯಗಳಲ್ಲಿ ಸ್ವಾವಲಂಬನೆ ಸಾಧಿಸುವ ಯೋಜನೆಗೆ ಮೋದಿ ಅವರು ಚಾಲನೆ ನೀಡಲಿದ್ದಾರೆ. ಪ್ರಸ್ತುತ ದ್ವಿದಳ ಧಾನ್ಯಗಳ ಉತ್ಪಾದನೆ 252.38 ಲಕ್ಷ ಟನ್ ಇದೆ. 2030–31ರ ಬೆಳೆ ವರ್ಷದ ವೇಳೆಗೆ ಇದನ್ನು 350 ಲಕ್ಷ ಟನ್ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.
ಈ ಯೋಜನೆಗೆ ₹11,440 ಕೋಟಿ ವೆಚ್ಚ ಮಾಡಲಾಗುವುದು. ಹೆಚ್ಚು ಇಳುವರಿ ನೀಡುವ ಮತ್ತು ರೋಗಗಳನ್ನು ತಾಳಿಕೊಂಡು ಹೆಚ್ಚಿನ ಉತ್ಪಾದನೆ ನೀಡುವ ವಿವಿಧ ಮಾದರಿಯ ಬೀಜಗಳನ್ನು ರೈತರಿಗೆ ನೀಡಲಾಗುವುದು ಎಂದರು.
‘ಪ್ರಧಾನ ಮಂತ್ರಿ ಧನ ಧಾನ್ಯ ಯೋಜನೆ’ಗೆ ₹24 ಸಾವಿರ ಕೋಟಿ ವ್ಯಯಿಸಲಾಗುವುದು. ಕಡಿಮೆ ಕೃಷಿ ಚಟುವಟಿಕೆ ಇರುವ ಆಯ್ದ 100 ಜಿಲ್ಲೆಗಳಲ್ಲಿ ಈ ಯೋಜನೆಯಡಿ ಉತ್ಪಾದನೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.