
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತನ್ನ ದತ್ತಾಂಶ ಕೇಂದ್ರವನ್ನು ಒಡಿಶಾದಲ್ಲಿ ನಿರ್ಮಾಣ ಮಾಡಿದೆ. ಇದು ಭೂಕಂಪನಕ್ಕೆ ಹೆಚ್ಚು ತುತ್ತಾಗಬಹುದಾದ ವಲಯಗಳಿಂದ ಹಾಗೂ ಗಡಿಯಾಚೆಯಿಂದ ಅಪಾಯ ಎದುರಾಗಬಹುದಾದ ಪ್ರದೇಶಗಳಿಂದ ದೂರದಲ್ಲಿ ಇದೆ.
ಮಹತ್ವದ ಹಣಕಾಸು ಮೂಲಸೌಕರ್ಯವನ್ನು ಅಪಾಯಗಳಿಂದ ರಕ್ಷಿಸುವ ಉದ್ದೇಶದಿಂದ ಆರ್ಬಿಐ ದತ್ತಾಂಶ ಕೇಂದ್ರವನ್ನು ಇಲ್ಲಿ ನಿರ್ಮಿಸಿದೆ.
ಭುವನೇಶ್ವರದಲ್ಲಿ ಇರುವ ಇದು ಆರ್ಬಿಐನ ಕರೆನ್ಸಿ ನಿರ್ವಹಣೆಗೆ, ಪಾವತಿ ಪ್ರಕ್ರಿಯೆಗಳನ್ನು ಬೆಂಬಲಿಸುವ ವ್ಯವಸ್ಥೆಗಳನ್ನು ತನ್ನಲ್ಲಿ ಇರಿಸಿಕೊಳ್ಳಲಿದೆ ಎಂದು ತಜ್ಞರು ಹೇಳಿದ್ದಾರೆ.
ಒಡಿಶಾದಲ್ಲಿನ ಈ ಕೇಂದ್ರವು ಭಾರತದ ಪಶ್ಚಿಮ ಹಾಗೂ ಉತ್ತರದ ಗಡಿ ಪ್ರದೇಶಗಳಿಂದ ಬಹುದೂರದಲ್ಲಿ ಇದೆ. ಇದರಿಂದಾಗಿ ಗಡಿಯಾಚೆಯಿಂದ ಎದುರಾಗಬಹುದಾದ ಕ್ಷಿಪಣಿ ಅಥವಾ ಡ್ರೋನ್ ದಾಳಿಯ ಸಾಧ್ಯತೆ ಕಡಿಮೆ ಎಂದು ತಜ್ಞರೊಬ್ಬರು ತಿಳಿಸಿದರು.
ಆರ್ಬಿಐನ ಪ್ರಮುಖ ದತ್ತಾಂಶ ಕೇಂದ್ರವು ನವಿ ಮುಂಬೈನ ಖಾರ್ಗರ್ನಲ್ಲಿದೆ. ಒಡಿಶಾದಲ್ಲಿ ಇರುವುದು ಎರಡನೆಯ ದತ್ತಾಂಶ ಕೇಂದ್ರ.
ಒಡಿಶಾದಲ್ಲಿ ಹೆಚ್ಚಿನ ಪ್ರಮಾಣದ ಡಿಜಿಟಲ್ ದಟ್ಟಣೆ ಇಲ್ಲ. ಹೀಗಾಗಿ ಇಲ್ಲಿ ದತ್ತಾಂಶ ಕೇಂದ್ರವನ್ನು ನಿರ್ಮಿಸುವ ಮೂಲಕ ಆರ್ಬಿಐ ಸೈಬರ್ ಸಮಸ್ಯೆಗಳು ಎದುರಾಗುವ ಅಪಾಯವನ್ನು ತಗ್ಗಿಸಲು ಯತ್ನಿಸುತ್ತಿರಬಹುದು ಎಂದು ಇನ್ನೊಬ್ಬರು ತಜ್ಞರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.