ADVERTISEMENT

ಕೇಂದ್ರಕ್ಕೆ ₹3 ಲಕ್ಷ ಕೋಟಿ ವರ್ಗಾವಣೆಗೆ ವಿರೋಧಿಸಿದ್ದ ಆರ್‌ಬಿಐ: ಮಾಜಿ ಗವರ್ನರ್‌

ಪಿಟಿಐ
Published 7 ಸೆಪ್ಟೆಂಬರ್ 2023, 15:44 IST
Last Updated 7 ಸೆಪ್ಟೆಂಬರ್ 2023, 15:44 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: 2019ರ ಲೋಕಸಭಾ ಚುನಾವಣೆಗೂ ಮೊದಲು ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ (ಆರ್‌ಬಿಐ) ₹2–3 ಲಕ್ಷ ಕೋಟಿಯಷ್ಟು ಹಣವನ್ನು ಪಡೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರದಲ್ಲಿನ ಕೆಲವರು ರೂಪಿಸಿದ್ದ ಯೋಜನೆಗೆ ಆರ್‌ಬಿಐ ಮೊದಲು ಪ್ರತಿರೋಧ ಒಡ್ಡಿತ್ತು.

ಆ ಸಂದರ್ಭದಲ್ಲಿ ಆರ್‌ಬಿಐ ಡೆಪ್ಯುಟಿ ಗವರ್ನರ್ ಆಗಿದ್ದ ವಿರಲ್ ಆಚಾರ್ಯ ಅವರು ಈ ವಿಚಾರವನ್ನು ತಮ್ಮ ‘ಕ್ವೆಸ್ಟ್‌ ಫಾರ್ ರಿಸ್ಟೋರಿಂಗ್ ಫೈನಾನ್ಶಿಯಲ್ ಸ್ಟೆಬಿಲಿಟಿ ಇನ್ ಇಂಡಿಯಾ’ ಎಂಬ ಪುಸ್ತಕಕ್ಕೆ ಬರೆದಿರುವ ಪರಿಷ್ಕೃತ ಪೀಠಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಈ ಪ್ರತಿರೋಧದ ಕಾರಣದಿಂದಾಗಿ ಆರ್‌ಬಿಐ ಹಾಗೂ ಕೇಂದ್ರ ಸರ್ಕಾರದ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು ಎನ್ನಲಾಗಿದೆ. ಆರ್‌ಬಿಐ ಹಾಗೂ ಸರ್ಕಾರದ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಆಚಾರ್ಯ ಅವರು 2018ರ ತಮ್ಮ ಒಂದು ಉಪನ್ಯಾಸದಲ್ಲಿಯೂ ಉಲ್ಲೇಖಿಸಿದ್ದರು.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಆರ್‌ಬಿಐ ಕ್ರೋಡೀಕರಿಸಿದ್ದ ಗಣನೀಯ ಪ್ರಮಾಣದ ಮೊತ್ತವನ್ನು ಈಗಿನ ಸರ್ಕಾರದ ಖಾತೆಗೆ ವರ್ಗಾವಣೆ ಮಾಡಲು ‘ಅಧಿಕಾರಶಾಹಿ ಹಾಗೂ ಸರ್ಕಾರದಲ್ಲಿನ ಕೆಲವು ಸೃಜನಶೀಲ ಮನಸ್ಸುಗಳು’ ಯೋಜನೆಯೊಂದನ್ನು ರೂಪಿಸಿದ್ದವು ಎಂದು ಆಚಾರ್ಯ ಅವರು ಬರೆದಿದ್ದಾರೆ.

ಆರ್‌ಬಿಐ ಪ್ರತಿವರ್ಷ ತನ್ನ ಲಾಭದಲ್ಲಿ ಒಂದು ಪಾಲನ್ನು ಕೇಂದ್ರಕ್ಕೆ ವರ್ಗಾಯಿಸುತ್ತದೆ. ನೋಟು ರದ್ದತಿ ಜಾರಿಗೆ ಬಂದ ವರ್ಷದಲ್ಲಿ, ಹೊಸ ನೋಟುಗಳ ಮುದ್ರಣದ ವೆಚ್ಚದ ಕಾರಣದಿಂದಾಗಿ ಕೇಂದ್ರಕ್ಕೆ ವರ್ಗಾವಣೆ ಮಾಡುವ ಹಣದ ಮೊತ್ತವು ಕಡಿಮೆಯಾಯಿತು. ಇದು ಸರ್ಕಾರದಿಂದ ಬರುವ ಬೇಡಿಕೆ ‘ತೀವ್ರಗೊಳ್ಳಲು’ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.