ನವದೆಹಲಿ: ಸಾಲದ ಕಂತುಗಳನ್ನು ಕಟ್ಟಲು 2020ರ ಮಾರ್ಚ್ನಿಂದ ಆಗಸ್ಟ್ವರೆಗೆ ನೀಡಿದ್ದ ವಿನಾಯಿತಿ ಅವಧಿಗೆ ಸಂಬಂಧಿಸಿದ ಚಕ್ರಬಡ್ಡಿಯನ್ನು ಮನ್ನಾ ಮಾಡುವಂತೆ ಸುಪ್ರೀಂ ಕೋರ್ಟ್ ಈಚೆಗೆ ನೀಡಿರುವ ಆದೇಶದ ಪರಿಣಾಮವಾಗಿ ರಾಷ್ಟ್ರೀಕೃತ ಬ್ಯಾಂಕ್ಗಳು ಹೆಚ್ಚುವರಿಯಾಗಿ ಗರಿಷ್ಠ ₹ 2 ಸಾವಿರ ಕೋಟಿ ಹೊರೆ ಹೊರಬೇಕಾಗಬಹುದು.
₹ 2 ಕೋಟಿಗಿಂತ ಕಡಿಮೆ ಮೊತ್ತದ ಸಾಲಗಳ ಮೇಲಿನ ಚಕ್ರಬಡ್ಡಿಯನ್ನು ನವೆಂಬರ್ನಲ್ಲಿ ಮನ್ನಾ ಮಾಡಲಾಯಿತು. ಆದರೆ ಈಗ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು, ₹ 2 ಕೋಟಿಗಿಂತ ಹೆಚ್ಚಿನ ಮೊತ್ತದ ಸಾಲಗಳಿಗೂ ಅನ್ವಯ ಆಗುತ್ತದೆ. ಚಕ್ರಬಡ್ಡಿ ಮನ್ನಾ ಯೋಜನೆಯು, ವಿನಾಯಿತಿ ಸೌಲಭ್ಯ ಪಡೆಯದವರಿಗೂ ಅನ್ವಯವಾಗಿದೆ. ಚಕ್ರಬಡ್ಡಿ ಮನ್ನಾ ಮಾಡಲು 2020–21ರಲ್ಲಿ ಕೇಂದ್ರವು ಒಟ್ಟು ₹ 5,500 ಕೋಟಿ ವಿನಿಯೋಗಿಸಿದೆ.
ಕಂತು ಕಟ್ಟಲು ವಿನಾಯಿತಿ ಪಡೆದಿದ್ದ ಅವಧಿಗೆ ಮಾತ್ರ ಅನ್ವಯವಾಗುವಂತೆ ಚಕ್ರಬಡ್ಡಿಯ ಮೊತ್ತವನ್ನು ಬ್ಯಾಂಕ್ಗಳು ಮನ್ನಾ ಮಾಡಲಿವೆ. ಉದಾಹರಣೆಗೆ, ಸಾಲಗಾರನೊಬ್ಬ ಮೂರು ತಿಂಗಳ ಅವಧಿಗೆ ವಿನಾಯಿತಿ ಪಡೆದಿದ್ದರೆ ಆ ಅವಧಿಗೆ ಮಾತ್ರ ಚಕ್ರಬಡ್ಡಿ ಮನ್ನಾ ಸೌಲಭ್ಯ ಸಿಗಲಿದೆ.
ಈಗ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಕಂತು ಹಿಂದಿರುಗಿಸಲು ವಿನಾಯಿತಿ ಪಡೆದಿದ್ದ ಅವಧಿಗೆ ಮಾತ್ರ ಸೀಮಿತವಾಗಿದೆ. ಹಾಗಾಗಿ ರಾಷ್ಟ್ರೀಕೃತ ಬ್ಯಾಂಕ್ಗಳು ಹೊರಬೇಕಾಗಿರುವ ಹೊರೆ ₹ 2 ಸಾವಿರ ಕೋಟಿಗಿಂತ ಕಡಿಮೆ ಇರಲಿದೆ ಎಂದು ಮೂಲಗಳು ಹೇಳಿವೆ. ಅಲ್ಲದೆ, ಯಾವ ದಿನಾಂಕಕ್ಕೆ ಮೊದಲು ಚಕ್ರಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ತೀರ್ಪಿನಲ್ಲಿ ಹೇಳಿಲ್ಲ. ಹಾಗಾಗಿ, ಹಂತ ಹಂತವಾಗಿ ಮನ್ನಾ ಮಾಡಬಹುದು ಎಂದು ಅಧಿಕಾರಿಯೊಬ್ಬರು ಹೇಳಿದೆ.
ಈ ನಡುವೆ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವ ಭಾರತೀಯ ಬ್ಯಾಂಕ್ಗಳ ಒಕ್ಕೂಟವು ಚಕ್ರಬಡ್ಡಿ ಮನ್ನಾ ಮಾಡುವುದರಿಂದ ಆಗುವ ಹಣಕಾಸಿನ ಹೊರೆಗೆ ಪ್ರತಿಯಾಗಿ ಬ್ಯಾಂಕ್ಗಳಿಗೆ ಸರ್ಕಾರವೇ ಹಣ ಕೊಡಬೇಕು ಎಂದು ಕೇಳಿದೆ. ಈ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.