ADVERTISEMENT

ಎಸ್‍ಸಿಡಿಸಿಸಿ ಬ್ಯಾಂಕ್: ₹30.83 ಕೋಟಿ ಲಾಭ

2019–20 ವಾರ್ಷಿಕ ವರದಿ ಬಿಡುಗಡೆ ಮಾಡಿದ ಅಧ್ಯಕ್ಷ ಎನ್‌. ರಾಜೇಂದ್ರ ಕುಮಾರ್

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 13:43 IST
Last Updated 10 ಸೆಪ್ಟೆಂಬರ್ 2020, 13:43 IST
   

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‍ಸಿಡಿಸಿಸಿ ಬ್ಯಾಂಕ್) 2020ರ ಮಾರ್ಚ್‌ 31ಕ್ಕೆ ಅಂತ್ಯವಾದ ಆರ್ಥಿಕ ವರ್ಷದಲ್ಲಿ ₹30.83 ಕೋಟಿ ಲಾಭ ಗಳಿಸಿದ್ದು, ಬ್ಯಾಂಕಿನ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆಯಾಗಿದೆ.

2019–20ನೇ ಸಾಲಿನ ವರದಿ ಬಿಡುಗಡೆ ಮಾಡಿರುವ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್, ‘ಈ ವರ್ಷದಲ್ಲಿ ₹ 8,466.31 ಕೋಟಿ ಒಟ್ಟು ವ್ಯವಹಾರ ದಾಖಲಿಸಿದೆ. ಕಳೆದ ಸಾಲಿಗಿಂತ ಶೇ 11.56 ಏರಿಕೆ ಕಂಡಿದೆ. 2020-21ನೇ ಸಾಲಿಗೆ ₹ 9,660.00 ಕೋಟಿ ವ್ಯವಹಾರದ ಗುರಿ ಹೊಂದಿದೆ. ಬ್ಯಾಂಕ್ ತನ್ನ 105 ಶಾಖೆಗಳ ಮೂಲಕ ಈ ಸಾಲಿನಲ್ಲಿ ಒಟ್ಟು ₹4,205.97 ಕೋಟಿ ಠೇವಣಿ ಸಂಗ್ರಹಿಸಿದೆ. ಇದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ಗಳಿಗಿಂತ ಅತ್ಯಧಿಕವಾಗಿದೆ. ಕಳೆದ ಬಾರಿಗಿಂತ ಶೇ 8.22 ಏರಿಕೆಯಾಗಿದೆ’ ಎಂದು ತಿಳಿಸಿದ್ದಾರೆ.

ಎಂ.ಎನ್. ರಾಜೇಂದ್ರಕುಮಾರ್‌

‘₹3264.13 ಕೋಟಿ ಮುಂಗಡ ನೀಡಲಾಗಿದೆ. ಕೃಷಿ ಹಾಗೂ ಕೃಷಿ ಅಭಿವೃದ್ಧಿಗೆ ಅಲ್ಪಾವಧಿ ಸಾಲವಾಗಿ ₹1,237.57 ಕೋಟಿ, ಮಧ್ಯಮಾವಧಿ ಸಾಲ ₹151.82 ಕೋಟಿ ಸೇರಿದಂತೆ ಕೃಷಿ ಕ್ಷೇತ್ರಕ್ಕೆ ಒಟ್ಟು ₹1389.39 ಕೋಟಿ ಸಾಲ ನೀಡಲಾಗಿದೆ. ಕೃಷಿ ಹಾಗೂ ಕೃಷಿಯೇತರ ಸಾಲಗಳ ಹೊರಬಾಕಿ ₹4260.34 ಕೋಟಿ ಆಗಿರುತ್ತದೆ. ಕೃಷಿ ಸಾಲ ಮರುಪಾವತಿಯಲ್ಲಿ ಸತತ 25ನೇ ವರ್ಷವೂ ಶೇ 100 ಸಾಧನೆ ಮಾಡಿದೆ’ ಎಂದು ಅವರು ವಿವರಿಸಿದ್ದಾರೆ.

ADVERTISEMENT

ಬ್ಯಾಂಕಿನ ಆರ್ಥಿಕ ತಖ್ತೆ:ಬ್ಯಾಂಕ್‍ಗೆ ಒಟ್ಟು 1001 ಸಂಘಗಳು ಸದಸ್ಯರಾಗಿವೆ. ಇವುಗಳ ಪಾಲು ಬಂಡವಾಳ ₹207.05 ಕೋಟಿ ಆಗಿರುತ್ತದೆ. ಇದು ಕಳೆದ ವರ್ಷಕ್ಕಿಂತ ಶೇ 15.96 ಏರಿಕೆಯಾಗಿದೆ. ದುಡಿಯುವ ಬಂಡವಾಳ ₹6,110.59 ಕೋಟಿ ಆಗಿದ್ದು, ಇದು ಕಳೆದ ವರ್ಷಕ್ಕಿಂತ (₹5,421.44 ಕೋಟಿ) ಶೇ 12.71 ರಷ್ಟು ಏರಿಕೆ ಕಂಡಿದೆ. ಬ್ಯಾಂಕ್ ₹116.48 ಕೋಟಿ ವಿವಿಧ ನಿಧಿಗಳನ್ನು ಹೊಂದಿರುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕಿಸಾನ್ ಕ್ರೆಡಿಟ್ ಕಾರ್ಡ್:ಮಂಗಳ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆಯನ್ನು ಹೊಂದಿರುವ ರೈತರಿಗೆ 1,13,579 ರುಪೇ ಕಿಸಾನ್ ಕಾರ್ಡ್‍ಗಳನ್ನು ವಿತರಿಸಲಾಗಿದೆ. 52,783 ರುಪೇ ಡೆಬಿಟ್ ಕಾರ್ಡ್‍ಗಳನ್ನು ಇತರ ಗ್ರಾಹಕರಿಗೆ ನೀಡಲಾಗಿದೆ. ಬ್ಯಾಂಕ್ ಒಟ್ಟು 3,2597 ಗುಂಪುಗಳನ್ನು ಹೊಂದಿದೆ. ಜಿಲ್ಲೆಯಲ್ಲಿ ಒಟ್ಟು 1,22,668 ರೈತರಿಗೆ ಮಂಗಳಾ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ ವಿತರಿಸಲಾಗಿದೆ. 82,069 ಕಿಸಾನ್ ಕ್ರೆಡಿಟ್ ಕಾರ್ಡುದಾರರಿಗೆ ವೈಯುಕ್ತಿಕ ಅಪಘಾತ ವಿಮಾ ಸೌಲಭ್ಯವನ್ನು ಒದಗಿಸಲಾಗಿದೆ.

ಟ್ಯಾಬ್ ಬ್ಯಾಂಕಿಂಗ್: ಬ್ಯಾಂಕ್ ವ್ಯವಹಾರವನ್ನು ಸರಳೀಕರಿಸುವ ನಿಟ್ಟಿನಲ್ಲಿ ಟ್ಯಾಬ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಗ್ರಾಹಕರಿಗೆ ಪರಿಚಯಿಸಲು ಬ್ಯಾಂಕ್ ಮುಂದಾಗಿದೆ. ಬ್ಯಾಂಕಿನ ಟ್ಯಾಬ್ಲೆಟ್ ಬಳಸಿ ತಮ್ಮ ಬ್ಯಾಂಕ್ ಖಾತೆಯನ್ನು ತೆರೆಯುವ ಹಾಗೂ ನಿರ್ವಹಿಸುವ ನೂತನ ವ್ಯವಸ್ಥೆ ಇದಾಗಿದೆ. ಬ್ಯಾಂಕಿನ ಎಲ್ಲ ಶಾಖೆಗಳುಈಗಾಗಲೇ ಇಂಟರ್‌ನೆಟ್‌, ಕೋರ್ ಬ್ಯಾಂಕಿಂಗ್‍, ಅ್ಯಪ್ ಮೂಲಕ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿದೆ.

ಮುಂದಿನ ಯೋಜನೆಗಳು:ಏಕರೂಪದ ಲೆಕ್ಕ ಪದ್ಧತಿ ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಎಲ್ಲ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಕಾಮನ್ ಸಾಫ್ಟ್‌ವೇರ್ ಅಳವಡಿಸಲು ಕಾರ್ಯ ಯೋಜನೆ ರೂಪಿಸಲಾಗಿದೆ. ಇಂಟರ್ ಬ್ಯಾಂಕ್ ಮೊಬೈಲ್ ಪೇಮೆಂಟ್ ಸಿಸ್ಟಮ್ ಯೋಜನೆ ಅನುಷ್ಠಾನಕ್ಕೆ ಚಿಂತನೆ ನಡೆಸಿದೆ. ಈ ಯೋಜನೆಯಿಂದ ಗ್ರಾಹಕರ ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾಯಿಸಬಹುದು ಎಂದು ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.