ಮುಂಬೈ: ದೀಪಾವಳಿ ಸಂದರ್ಭದಲ್ಲಿ ನಡೆದ ಮುಹೂರ್ತ ವಹಿವಾಟಿನಲ್ಲಿ ದೇಶದ ಷೇರುಪೇಟೆ ಸೂಚ್ಯಂಕಗಳು ಏರಿಕೆ ದಾಖಲಿಸಿದವು. ಸೋಮವಾರ ನಡೆದ ಒಂದು ತಾಸು ಅವಧಿಯ ವಹಿವಾಟಿನಲ್ಲಿ ಹೂಡಿಕೆದಾರರು ಷೇರುಗಳ ಖರೀದಿಗೆ ಗಮನ ನೀಡಿದರು.
ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 524 ಅಂಶ, ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 154 ಅಂಶ ಏರಿಕೆ ಕಂಡವು. ಸೆನ್ಸೆಕ್ಸ್ನ ಭಾಗವಾಗಿರುವ ಮೂವತ್ತು ಕಂಪನಿಗಳ ಪೈಕಿ ಹಿಂದುಸ್ತಾನ್ ಯೂನಿಲಿವರ್ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್ ಷೇರುಗಳು ಮಾತ್ರ ಇಳಿಕೆ ಕಂಡವು.
ಬಿಎಸ್ಇ ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಸೂಚ್ಯಂಕಗಳು ಕೂಡ ಏರಿಕೆ ಕಂಡಿವೆ. ಹಿಂದಿನ ವರ್ಷದ ಮುಹೂರ್ತ ವಹಿವಾಟಿನಲ್ಲಿ ಸೆನ್ಸೆಕ್ಸ್ 464 ಅಂಶ, ನಿಫ್ಟಿ 252 ಅಂಶ ಕುಸಿತ ಕಂಡಿದ್ದವು.
‘ದೀಪಾವಳಿಗೆ ಕೊನೆಗೊಂಡ ಒಂದು ವರ್ಷದ ಅವಧಿಯಲ್ಲಿ ದೇಶದ ಷೇರು ಮಾರುಕಟ್ಟೆಗಳು ಅಲ್ಪ ಪ್ರಮಾಣದ ಕುಸಿತ ದಾಖಲಿಸಿದ್ದರೂ, ಭಾರತವು ಇತರ ದೇಶಗಳ ಷೇರುಪೇಟೆಗಳಿಗೆ ಹೋಲಿಸಿದರೆ ವಿಶಿಷ್ಟವಾಗಿ ನಿಲ್ಲುತ್ತದೆ. ಯುರೋಪಿನಲ್ಲಿ ಯುದ್ಧ, ಹಣದುಬ್ಬರ ಹೆಚ್ಚಳ ಮತ್ತು ಬ್ಯಾಂಕ್ ಬಡ್ಡಿ ದರ ಏರಿಕೆಯ ಕಾಲಘಟ್ಟದಲ್ಲಿ ಕೂಡ ಭಾರತದ ಷೇರು ಮಾರುಕಟ್ಟೆಗಳು ಉತ್ತಮ ಸಾಧನೆ ತೋರಿರುವುದು ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತದ ಶಕ್ತಿಯನ್ನು ತೋರಿಸುತ್ತಿದೆ’ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್ನ ಮುಖ್ಯ ಹೂಡಿಕೆ ತಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.
ಭಾರತದ ಆರ್ಥಿಕತೆಯ ಮೂಲಭೂತ ಅಂಶಗಳು ಇತರ ದೇಶಗಳಿಗೆ ಹೋಲಿಸಿದರೆ ಬಲಿಷ್ಠವಾಗಿವೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ಮತ್ತು ಸಣ್ಣ ಹೂಡಿಕೆದಾರರು ನೆಚ್ಚಿಕೊಳ್ಳಬಹುದಾದ ಶಕ್ತಿಗಳಾಗಿ ಬೆಳೆದಿದ್ದಾರೆ. ಈ ಸ್ಥಿತಿ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.