ಬೆಂಗಳೂರು: ಕೋವಿಡ್ ಬಿಕ್ಕಟ್ಟಿನಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೇಷ್ಮೆ ಉದ್ದಿಮೆಯ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವುದಾಗಿ ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಕೆ. ಸಿ. ನಾರಾಯಣಗೌಡ ಅವರು ಭರವಸೆ ನೀಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಭೆ ಕರೆದು ಉದ್ದಿಮೆಯ ಭಾಗಿದಾರರೆಲ್ಲರ ತೊಂದರೆ ನಿವಾರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ತಮ್ಮನ್ನು ಭೇಟಿಯಾಗಿ ಅಹವಾಲು ಸಲ್ಲಿಸಿದ ಸಿಲ್ಕ್ ಅಸೋಸಿಯೇಷನ್ ಆಫ್ ಇಂಡಿಯಾದ ನಿಯೋಗಕ್ಕೆ ಸಚಿವರು ಈ ವಾಗ್ದಾನ ನೀಡಿದ್ದಾರೆ.
ಉತ್ಪಾದನೆಯಾದ ರೇಷ್ಮೆ ಮಾರಾಟಗೊಳ್ಳದೆ ಇಡೀ ಉದ್ದಿಮೆ ಬಿಕ್ಕಟ್ಟು ಎದುರಿಸುತ್ತಿದೆ. ಉದ್ದಿಮೆ ನೆಚ್ಚಿಕೊಂಡಿರುವ ಲಕ್ಷಾಂತರ ಕುಟುಂಬಗಳು ಬೀದಿಗೆ ಬಿದ್ದಿವೆ. ಹೂ ಬೆಳೆಗಾರರಿಗೆ ಘೋಷಿಸಿದ ನೆರವಿನ ಮಾದರಿಯಲ್ಲಿ ರೇಷ್ಮೆ ಬೆಳೆಗಾರರಿಗೂ ಹಣಕಾಸಿನ ಕೊಡುಗೆ ನೀಡಬೇಕು. ಕರ್ನಾಟಕ ರೇಷ್ಮೆ ಮಾರಾಟ ಮಂಡಳಿಗೆ ₹ 250 ಕೋಟಿ ಅನುದಾನ ಬಿಡುಗಡೆ ಮಾಡಬೇಕು. ರೇಷ್ಮೆ ಮೊಟ್ಟೆ ಉತ್ಪಾದಕರಿಗೆ ಕನಿಷ್ಠ ಬಡ್ಡಿಯ ಸಾಲದ ಸೌಲಭ್ಯ ಕಲ್ಪಿಸಬೇಕು. ಚಾಕಿ ಸಾಕಾಣಿಕೆದಾರರಿಗೆ ಹಣಕಾಸಿನ ನೆರವು ನೀಡಲು ₹ 20 ಕೋಟಿ ಅನುದಾನ ನೀಡಬೇಕು. ರೇಷ್ಮೆ ನೇಕಾರರಿಗೆ ಬ್ಯಾಂಕ್ ಸಾಲ ಕಲ್ಪಿಸಲು ನೆರವಾಗಬೇಕು ಎಂದು ನಿಯೋಗವು ಸಚಿವರಿಗೆ ಮನವಿ ಮಾಡಿಕೊಂಡಿದೆ.
ಅಸೋಸಿಯೇಷನ್ನಿನ ಗೌರವ ಅಧ್ಯಕ್ಷ ಸಿ. ನಾರಾಯಣಸ್ವಾಮಿ, ಅಧ್ಯಕ್ಷ ವಿ. ಬಾಲಸುಬ್ರಮಣಿಯನ್ ಮತ್ತು ಕಾರ್ಯದರ್ಶಿ ಎಂ. ರಾಮಚಂದ್ರಗೌಡ ಅವರು ನಿಯೋಗದ ನೇತೃತ್ವವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.