ADVERTISEMENT

ಎಂಎಸ್‌ಎಂಇ ಪ್ರಗತಿಗೆ ನೆರವಾಗಲು ಸರ್ಕಾರಕ್ಕೆ ಮನವಿ

ದಕ್ಷಿಣ ಭಾರತದ ಎಂಎಸ್‌ಎಂಇ ಶೃಂಗಸಭೆಯಲ್ಲಿ ಮನವಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 18:19 IST
Last Updated 17 ಜನವರಿ 2019, 18:19 IST
ಶೃಂಗಸಭೆಯಲ್ಲಿ ಸಣ್ಣ ಉದ್ಯಮಗಳ ಬೆಳವಣಿಗೆಗೆ ಸಂಬಂಧಿಸಿದ ‘ಐಎಸ್‌ಇಡಿ’ ವರದಿ ಬಿಡುಗಡೆ ಮಾಡಲಾಯಿತು. ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ. ಎಂ. ಹನುಮಂತರಾಯಪ್ಪ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ಕಾಸಿಯಾ ಅಧ್ಯಕ್ಷ ಬಸವರಾಜ ಎಸ್ ಜವಳಿ, ಸಂಸದ ಮುದ್ದಹನುಮೇಗೌಡ ಇದ್ದರು –ಪ್ರಜಾವಾಣಿ ಚಿತ್ರ
ಶೃಂಗಸಭೆಯಲ್ಲಿ ಸಣ್ಣ ಉದ್ಯಮಗಳ ಬೆಳವಣಿಗೆಗೆ ಸಂಬಂಧಿಸಿದ ‘ಐಎಸ್‌ಇಡಿ’ ವರದಿ ಬಿಡುಗಡೆ ಮಾಡಲಾಯಿತು. ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷ ಕೆ. ಎಂ. ಹನುಮಂತರಾಯಪ್ಪ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ, ಕಾಸಿಯಾ ಅಧ್ಯಕ್ಷ ಬಸವರಾಜ ಎಸ್ ಜವಳಿ, ಸಂಸದ ಮುದ್ದಹನುಮೇಗೌಡ ಇದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು:ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಆಶ್ರಯದಲ್ಲಿ ಗುರುವಾರ ಇಲ್ಲಿ ನಡೆದ ದಕ್ಷಿಣ ಭಾರತದ ಎಂಎಸ್‌ಎಂಇ ಶೃಂಗಸಭೆಯಲ್ಲಿ ಸಣ್ಣ ಉದ್ದಿಮೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಯಿತು.

ದೇಶದ ಕೈಗಾರಿಕಾ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡುತ್ತಿರುವ ಸಣ್ಣ ಉದ್ಯಮಗಳು ಉದ್ಯೋಗ ಸೃಷ್ಟಿಗೂ ತಮ್ಮದೇ ಆದ ಕೊಡುಗೆ ನೀಡುತ್ತಿವೆ.

ತಯಾರಿಕೆಯಲ್ಲಿ ಶೇ 40ರಷ್ಟು ರಫ್ತಿನಲ್ಲಿ ಶೇ 45ರಷ್ಟು ಪಾಲು ಹೊಂದಿವೆ. ಇಂತಹ ವಲಯ ಹಣಕಾಸು, ಕೌಶಲ್ಯದ ಕೊರತೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರ ಜತೆಗೆ ಕಾರ್ಮಿಕರಿಗೆ ಶೇ 18ರಷ್ಟು ಜಿಎಸ್‌ಟಿ ವಿಧಿಸುತ್ತಿರುವುದು ಉದ್ಯಮದ ಬೆಳವಣಿಗೆಗೆ ಇನ್ನಷ್ಟು ತೊಡಕಾಗಿದೆ.

ADVERTISEMENT

ಹೀಗಾಗಿ ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರೋಪಾಯಗಳನ್ನು ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಶೃಂಗಸಭೆಯ ಮುಲಕ ಮನವಿ ಮಾಡಲಾಯಿತು.

ಸದ್ಯ, ₹ 2 ಕೋಟಿವರೆಗಿನ ವಹಿವಾಟಿಗೆ ಸೂಕ್ಷ್ಮ, ₹ 2 ಕೋಟಿಯಿಂದ ₹ 25 ಕೋಟಿಯವರೆಗಿನ ವಹಿವಾಟಿಗೆ ಸಣ್ಣ ಹಾಗೂ ₹ 25 ಕೋಟಿಯಿಂದ₹ 50 ಕೋಟಿಯವರೆಗಿನ ವಹಿವಾಟಿಗೆ ಮಧ್ಯಮ ಕೈಗಾರಿಕೆಗಳು ಎನ್ನುವ ವ್ಯಾಖ್ಯಾನ ಇದೆ. ಈವ್ಯಾಖ್ಯಾನವನ್ನು ಪರಿಷ್ಕರಣೆ ನಡೆಸಲು ಕೇಂದ್ರ ಸರ್ಕಾರ ಮುಂದಾಗಿದೆ. ₹ 250 ಕೊಟಿಯವರೆಗೆ ವಹಿವಾಟು ನಡೆಸುವ ಎಲ್ಲರನ್ನೂ ವ್ಯಾಪ್ತಿಗೆ ತರಲು ನಿರ್ಧರಿಸಲಾಗಿದೆ.ಹೀಗೆ ಮಾಡುವುದರಿಂದ ಸಣ್ಣ ಕೈಗಾರಿಕೆಗಳು ಸಂಕಷ್ಟಕ್ಕೀಡಾಗಲಿವೆ. ಭಾರಿ ಸಂಖ್ಯೆಯ ಸಂಸ್ಥೆಗಳು ಈ ವಲಯದ ವ್ಯಾಪ್ತಿಗೆ ಬರಲಿವೆ. ಅನರ್ಹರು ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಶೃಂಗಸಭೆಯಲ್ಲಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಯಿತು.

‘ಕೇಂದ್ರ ಸರ್ಕಾರವು ಸಣ್ಣ ಉದ್ದಿಮೆಗಳಿಗೆ ಪೂರಕವಾದ ನೀತಿ ನಿಯಮಗಳನ್ನು ರೂಪಿಸಲು ಮುಂದಾಗಿದೆ. ಎಂಎಸ್‌ಎಂಇ ವಲಯದ ಕುಂದು ಕೊರತೆಗಳನ್ನು ಹಾಗೂ ಮನವಿ ಪತ್ರದಲ್ಲಿನ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವೆ’ ಎಂದು ಕೈಗಾರಿಕೆಗಳಿಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿ ಸದಸ್ಯ ಎಸ್‌.ಪಿ ಮುದ್ದಹನುಮೇಗೌಡ ಭರವಸೆ ನೀಡಿದರು.

ಕಾಸಿಯಾ ಮತ್ತು ಶೃಂಗಸಭೆಯ ಅಧ್ಯಕ್ಷ ಬಸವರಾಜ್ ಎಸ್. ಜವಳಿ, ಎಂಎಸ್‌ಎಂಇ ವಲಯದ ಕುಂದು ಕೊರತೆಗಳಿಗೆ ಹಾಗೂ ಸಮಸ್ಯೆಗಳಿಗೆ ಪರಿಹಾರೋಪಾಯಗಳನ್ನು ಕೋರಿ, ಶೃಂಗಸಭೆಯಧ್ಯೇಯೋದ್ದೇಶಗಳನ್ನುವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.