ADVERTISEMENT

ಪಾಲಿಸಿದಾರರಿಗೆ ವಿಮೆ ಪರಿಹಾರ ವಿವರ

ಜುಲೈನಿಂದ ಜಾರಿಗೆ ತರಲು ವಿಮೆ ಪ್ರಾಧಿಕಾರ ಸೂಚನೆ

ಪಿಟಿಐ
Published 10 ಏಪ್ರಿಲ್ 2019, 18:37 IST
Last Updated 10 ಏಪ್ರಿಲ್ 2019, 18:37 IST

ನವದೆಹಲಿ:ವಿಮೆ ಪರಿಹಾರ ಇತ್ಯರ್ಥಪಡಿಸುವ ಪ್ರಕ್ರಿಯೆಯು ವಿವಿಧ ಹಂತಗಳಲ್ಲಿ ಇರುವ ವಿವರಗಳನ್ನು ವಿಮೆ ಸಂಸ್ಥೆಗಳು ಜುಲೈ ತಿಂಗಳಿನಿಂದ ಪಾಲಿಸಿದಾರರಿಗೆ ಒದಗಿಸಲಿವೆ.

ಪಾಲಿಸಿದಾರರ ಹಿತಾಸಕ್ತಿ ರಕ್ಷಿಸಲು ವಿಮೆ ಸಂಸ್ಥೆಗಳು ಸ್ಪಷ್ಟ ಮತ್ತು ಪಾರದರ್ಶಕ ಸ್ವರೂಪದ ಸಂವಹನ ನೀತಿಯನ್ನು ಅನುಸರಿಸಬೇಕು ಎಂದು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಸುತ್ತೋಲೆ ಹೊರಡಿಸಿದೆ.

ವಿಮೆ ಪರಿಹಾರ (ಕ್ಲೇಮ್‌) ಪಡೆಯುವ ಪ್ರಕರಣಗಳಲ್ಲಿ ತಮ್ಮ ಕೋರಿಕೆ ಯಾವ ಹಂತದಲ್ಲಿ ಇದೆ ಎನ್ನುವುದರ ಮಾಹಿತಿಯು ಪಾಲಿಸಿದಾರರಿಗೆ ಸುಲಭವಾಗಿ ದೊರೆಯಬೇಕು. ವಿಮೆ ಪರಿಹಾರ ಇತ್ಯರ್ಥ ಪ್ರಕ್ರಿಯೆಯು ನ್ಯಾಯೋಚಿತ ಮತ್ತು ಪಾರದರ್ಶಕವಾಗಿರಬೇಕು ಎನ್ನುವ ಕಾರಣಕ್ಕೆ ಎಲ್ಲ ವಿಮೆ ಸಂಸ್ಥೆಗಳು ಎಲ್ಲ ಹಂತಗಳ ಮಾಹಿತಿ ಒದಗಿಸಬೇಕು.

ADVERTISEMENT

ವಿಮೆ ಪಾಲಿಸಿಯ ಪ್ರಯೋಜನಗಳು ಫಲಾನುಭವಿಗಳಿಗೆ ಸಕಾಲದಲ್ಲಿ ದೊರೆಯುವಂತಾಗಲು ಸ್ಪಷ್ಟ ಮತ್ತು ಪಾರದರ್ಶಕ ಸಂವಹನವು ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದು ಪ್ರಾಧಿಕಾರವು ಅಭಿಪ್ರಾಯಪಟ್ಟಿದೆ.

ಜೀವ ವಿಮೆ, ಆರೋಗ್ಯ ಮತ್ತು ಸಾಮಾನ್ಯ ವಿಮೆ ಸಂಸ್ಥೆಗಳು ಪಾಲಿಸಿಗಳು ಮತ್ತು ವಿಮೆ ಪರಿಹಾರ ಪ್ರಕರಣಗಳ ಕುರಿತು ಪತ್ರ, ಇ–ಮೇಲ್‌, ಎಸ್‌ಎಂಎಸ್‌ ಸೇರಿದಂತೆ ಪ್ರಾಧಿಕಾರವು ಅನುಮೋದಿಸಿದ ಇತರ ಯಾವುದೇ ವಿದ್ಯುನ್ಮಾನ ವಿಧಾನದಲ್ಲಿ ಮಾಹಿತಿ ಒದಗಿಸಬೇಕು. ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯ ಜತೆಗೆ ಮಾಹಿತಿಯು ಸಾಧ್ಯವಾದಷ್ಟು ಮಟ್ಟಿಗೆ ಸ್ಥಳೀಯ ಭಾಷೆಯಲ್ಲಿ ಇರಬೇಕು ಎಂದೂ ಪ್ರಾಧಿಕಾರವು ಸೂಚಿಸಿದೆ.

ಆರೋಗ್ಯ ವಿಮೆ ವಿಷಯದಲ್ಲಿ ವಿಮೆ ಪರಿಹಾರ ಸೇವೆಗೆ ನೆರವಾಗುವ ಥರ್ಡ್‌ ಪಾರ್ಟಿ ಆ್ಯಡ್ಮಿನಿಸ್ಟ್ರೇಟರ್ಸ್‌ (ಟಿಪಿಎ) ನೆರವಾಗುವ ಪ್ರಕರಣಗಳಲ್ಲಿಯೂ, ವಿಮೆ ಸಂಸ್ಥೆಗಳೆ ಪ್ರಕರಣದ ಪ್ರತಿಯೊಂದು ಹಂತದ ವಿವರಗಳನ್ನು ಪಾಲಿಸಿದಾರರಿಗೆ ಒದಗಿಸಲು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.