ADVERTISEMENT

‘ಬೆಳವಣಿಗೆಗೆ ಅಡ್ಡಿಯಾಗದಂತೆ ಹಣದುಬ್ಬರದ ನಿಯಂತ್ರಣ ಅಗತ್ಯ’: ವರ್ಮಾ

ಪಿಟಿಐ
Published 26 ಜೂನ್ 2022, 19:53 IST
Last Updated 26 ಜೂನ್ 2022, 19:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ದೇಶದ ಆರ್ಥಿಕತೆಯು ಕೋವಿಡ್‌ ಸಾಂಕ್ರಾಮಿಕದ ಬಿಕ್ಕಟ್ಟಿನಿಂದ ಹೊರಬಂದು ಈಗಷ್ಟೇ ಚೇತರಿಕೆ ಕಂಡುಕೊಂಡಿದೆ. ಹೀಗಾಗಿ ಹಣದುಬ್ಬರ ನಿಯಂತ್ರಿಸುವ ಪ್ರಯತ್ನದಲ್ಲಿ ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗದಂತೆ ಎಚ್ಚರ ವಹಿಸುವ ಅಗತ್ಯ ಇದೆ’ ಎಂದು ಆರ್‌ಬಿಐನ ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸದಸ್ಯ ಜಯಂತ್ ವರ್ಮಾ ಹೇಳಿದ್ದಾರೆ.

‘ಜಾಗತಿಕ ರಾಜಕೀಯ ಬಿಕ್ಕಟ್ಟು ಮತ್ತು ಸರಕುಗಳ ಬೆಲೆ ಏರಿಕೆಯನ್ನು ಪರಿಗಣಿಸಿದ ನಂತರವು 2022–23 ಮತ್ತು 2023–24ನೇ ಹಣಕಾಸು ವರ್ಷಗಳ ಬೆಳವಣಿಗೆಯ ನಿರೀಕ್ಷೆಯು ಸಮಾಧಾನಕರ ಮಟ್ಟದಲ್ಲಿಯೇ ಇರಲಿದೆ’ ಎಂದು ತಿಳಿಸಿದ್ದಾರೆ.

‘ಹಣದುಬ್ಬರವು ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಹೆಚ್ಚು ಕಾಲ ಉಳಿಯಲಿದೆ. ಆದರೆ, ಮಧ್ಯಮಾವಧಿಯಲ್ಲಿ ಹಣದುಬ್ಬರವನ್ನು ನಿರೀಕ್ಷಿತ ಗುರಿಯ ಮಟ್ಟಕ್ಕೆ ತಗ್ಗಿಸುವ ಬಗ್ಗೆ ಯಾವುದೇ ಸಂದೇಹ ಇಲ್ಲ’ ಎಂದಿದ್ದಾರೆ.

ADVERTISEMENT

‘ರಷ್ಯಾ–ಉಕ್ರೇನ್‌ ಸಂಘರ್ಷ ಹಾಗೂ ಆಹಾರ ಮತ್ತು ಇತರೆ ಉತ್ಪನ್ನಗಳ ಪೂರೈಕೆಯಲ್ಲಿನ ಸಮಸ್ಯೆಗಳಿಂದಾಗಿ ಹಣದುಬ್ಬರವು ಗರಿಷ್ಠ ಮಟ್ಟದಲ್ಲಿ ಇದೆ. ಬೇಡಿಕೆಗೆ ಸಂಬಂಧಿಸಿದ ಒತ್ತಡಕ್ಕಿಂತಲೂ ಪೂರೈಕೆ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆ ಬಹಳ ಮುಖ್ಯವಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.