ನವದೆಹಲಿ: ದೂರಸಂಪರ್ಕ ಕಂಪನಿಗಳ ಸೇವಾ ಶುಲ್ಕ ಹೆಚ್ಚಾಗಬೇಕು, ಈ ಉದ್ಯಮದ ಮೇಲೆ ಸರ್ಕಾರ ವಿಧಿಸಿರುವ ಸುಂಕಗಳ ಪ್ರಮಾಣ ತಗ್ಗಬೇಕು ಎಂದು ಭಾರ್ತಿ ಏರ್ಟೆಲ್ ಕಂಪನಿಯ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಸೋಮವಾರ ಹೇಳಿದ್ದಾರೆ.
‘ಜನರು ಪ್ರತಿ ತಿಂಗಳು ಸರಾಸರಿ 16 ಜಿಬಿ ಡೇಟಾ ಬಳಕೆ ಮಾಡುತ್ತಿದ್ದಾರೆ. ದೂರಸಂಪರ್ಕ ಉದ್ಯಮವು ಇನ್ನಷ್ಟು ಲಾಭದಾಯಕ ಆಗಬೇಕು, ಬಂಡವಾಳಕ್ಕೆ ಪ್ರತಿಯಾಗಿ ಸೂಕ್ತ ಆದಾಯ ಬರಬೇಕು ಎಂದಾದರೆ ಸೇವಾ ಶುಲ್ಕವನ್ನು ಹೆಚ್ಚಿಸಬೇಕು’ ಎಂದು ಮಿತ್ತಲ್ ಅಭಿಪ್ರಾಯಪಟ್ಟಿದ್ದಾರೆ.
ಏರ್ಟೆಲ್ ಕಂಪನಿಯು ಶುಲ್ಕ ಹೆಚ್ಚಿಸಲು ಹಿಂದೇಟು ಹಾಕುವುದಿಲ್ಲ. ಕಳೆದ ಕೆಲವು ತಿಂಗಳುಗಳಲ್ಲಿ ಏರ್ಟೆಲ್ ತನ್ನ ಶುಲ್ಕದಲ್ಲಿ ತಂದಿರುವ ಬದಲಾವಣೆಗಳು ಇದಕ್ಕೆ ಸಾಕ್ಷಿ. ಕಂಪನಿಯು ತಾಳ್ಮೆ ಕಳೆದುಕೊಂಡಿದೆ ಎಂದು ಮಿತ್ತಲ್ ಹೇಳಿದ್ದಾರೆ. ಕಂಪನಿಯು ಕನಿಷ್ಠ ರಿಚಾರ್ಜ್ ಮೊತ್ತವನ್ನು ₹ 79ಕ್ಕೆ ಈಗಾಗಲೇ ಹೆಚ್ಚಿಸಿದೆ.
‘ಈ ಮೊತ್ತವು ಕಾಲಕ್ರಮೇಣ ₹ 99ಕ್ಕೆ ಏರಿಕೆ ಆಗಬಹುದೇ ಎಂಬ ಪ್ರಶ್ನೆಗೆ ನನ್ನ ಉತ್ತರ ಹೌದು ಎಂದಾಗಿರುತ್ತದೆ. ಆ ಏರಿಕೆ ಯಾವಾಗ ಆಗಬಹುದು ಎಂಬುದಷ್ಟೇ ಉಳಿದಿರುವ ಪ್ರಶ್ನೆ’ ಎಂದಿದ್ದಾರೆ. ಪ್ರತೀ ಗ್ರಾಹಕನಿಂದ ಪ್ರತಿ ತಿಂಗಳಿಗೆ ₹ 200 ಆದಾಯ ಬರುವಂತಹ ಸ್ಥಿತಿಗೆ ಉದ್ಯಮವು ತ್ವರಿತವಾಗಿ ಸಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಉದ್ಯಮವು ನಂತರದಲ್ಲಿ ಪ್ರತೀ ಗ್ರಾಹಕನಿಂದ ₹ 300 ಆದಾಯ ಬರುವ ಹಂತವನ್ನೂ ತಲುಪಬೇಕು. ಆಗ ಗ್ರಾಹಕರು ಹೇರಳ ಡೇಟಾ, ಸಂಗೀತ, ಮನರಂಜನೆಯ ಸೌಲಭ್ಯವನ್ನು ಪಡೆಯಬಹುದು’ ಎಂದು ವಿವರಿಸಿದ್ದಾರೆ. ಈ ಉದ್ಯಮದ ಶೇಕಡ 35ರಷ್ಟು ಆದಾಯವು ಸುಂಕ ಪಾವತಿಗೇ ವಿನಿಯೋಗ ಆಗುತ್ತಿದೆ. ದೂರಸಂಪರ್ಕ ಕಂಪನಿಗಳು ಎಜಿಆರ್ (ಹೊಂದಾಣಿಕೆ ಮಾಡಿದ ಒಟ್ಟು ವರಮಾನ), ಬಾಕಿ ಪಾವತಿಗಳು ಹಾಗೂ ತರಂಗಾಂತರಕ್ಕೆ ಸಂಬಂಧಿಸಿದ ಪಾವತಿಯ ಹೊರೆಯನ್ನು ಹೊತ್ತುಕೊಂಡಿವೆ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.