
ಬೆಂಗಳೂರು: ‘ಪ್ರಸಕ್ತ ಬಜೆಟ್ನಲ್ಲಿ ಹೈ-ಸ್ಪೀಡ್ ರೈಲು ಕಾರಿಡಾರ್ಗಳ ಪ್ರಸ್ತಾಪ ಆಗಿದೆ. ಇದು ದೇಶದ ವಿವಿಧ ನಗರಗಳ ನಡುವೆ ಸಂಪರ್ಕ ವೃದ್ಧಿಸುವ ಜೊತೆಗೆ ರಾಜ್ಯದಲ್ಲಿನ ಎಂಎಸ್ಎಂಇಗಳ ಬೆಳವಣಿಗೆಗೆ ಅನುಕೂಲ ಕಲ್ಪಿಸಲಿದೆ’ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್ಕೆಸಿಸಿಐ) ಅಧ್ಯಕ್ಷೆ ಉಮಾ ರೆಡ್ಡಿ ಹೇಳಿದ್ದಾರೆ.
ಅಮೆರಿಕದ ಸುಂಕ ಹೇರಿಕೆ ನಡುವೆ ಎಂಎಸ್ಎಂಇ ವಲಯಕ್ಕೆ ಕೇಂದ್ರವು ನೆರವು ನೀಡಿದೆ. ಸರಕುಗಳನ್ನು ಸಾಗಿಸಲು ಕಂಟೇನರ್ಗಳ ಕೊರತೆ ಇತ್ತು. ಇದೀಗ ದೇಶದಲ್ಲಿ ಕಂಟೇನರ್ಗಳನ್ನು ತಯಾರಿಸಲು ಕಾರ್ಖಾನೆ ಸ್ಥಾಪಿಸಲಾಗುವುದು ಎಂದು ಬಜೆಟ್ನಲ್ಲಿ ಘೋಷಿಸಲಾಗಿದೆ. ಅಲ್ಲದೆ, ಹೊಸ ಜಲಮಾರ್ಗಗಳನ್ನು ಘೋಷಿಸಿದೆ. ಇದು ಸಾಗಣೆ ವೆಚ್ಚವನ್ನು ಕಡಿಮೆ ಮಾಡಲಿದೆ ಎಂದು ಹೇಳಿದ್ದಾರೆ.
ಎಂಎಸ್ಎಂಇ, ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್ ವಲಯಕ್ಕೆ ನೆರವು ನೀಡಲಾಗಿದೆ. ಅಲ್ಲದೆ, ಎರಡು ಮತ್ತು ಮೂರನೇ ಹಂತಗಳ ನಗರಗಳ ಅಭಿವೃದ್ಧಿಯ ಮೇಲೆ ಬಜೆಟ್ ವಿಶೇಷ ಗಮನ ನೀಡಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಕೈಗಾರಿಕಾ ಕಾರಿಡಾರ್ಗಳು ಹಾಗೂ ಇತರೆ ಬೆಳವಣಿಗೆ ಕೇಂದ್ರಗಳಿಗೆ ಬಜೆಟ್ ನೇರ ಲಾಭವನ್ನು ನೀಡಲಿದೆ. ಇದು ನಾವೀನ್ಯ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕದ ಸ್ಥಾನವನ್ನು ಇನ್ನಷ್ಟು ಬಲಪಡಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2026–27ರ ಕೇಂದ್ರ ಬಜೆಟ್ ಭವಿಷ್ಯದತ್ತ ನೋಟ ಹೊಂದಿದ್ದು, ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡೇ ಭಾರತದ ಆರ್ಥಿಕ ಬೆಳವಣಿಗೆಯ ವೇಗವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.