ADVERTISEMENT

ಕಳಪೆ ಗುಣಮಟ್ಟ: ಮಾರಾಟವಾಗದ ಕಬ್ಬಿಣ ಅದಿರು

ಪಿಟಿಐ
Published 5 ಮೇ 2019, 20:00 IST
Last Updated 5 ಮೇ 2019, 20:00 IST
ಕಬ್ಬಿಣ ಅದಿರು
ಕಬ್ಬಿಣ ಅದಿರು   

ನವದೆಹಲಿ: ದುಬಾರಿ ದರ ಮತ್ತು ಕಳಪೆ ಗುಣಮಟ್ಟದ ಕಾರಣಕ್ಕೆ ಕರ್ನಾಟಕದಲ್ಲಿ 2018–19ನೆ ಸಾಲಿನಲ್ಲಿ 22 ಲಕ್ಷ ಟನ್‌ಗಳಷ್ಟು ಕಬ್ಬಿಣ ಅದಿರು ಮಾರಾಟವಾಗದೆ ಉಳಿದಿದೆ.

ಹಿಂದಿನ ವರ್ಷ ರಾಜ್ಯದಲ್ಲಿ 2.84 ಕೋಟಿ ಟನ್‌ಗಳಷ್ಟು ಕಬ್ಬಿಣ ಅದಿರು ಉತ್ಪಾದಿಸಲಾಗಿತ್ತು. ಅದರಲ್ಲಿ 2.62 ಕೋಟಿ ಟನ್‌ ಮಾತ್ರ ಮಾರಾಟವಾಗಿದ್ದು, 22 ಲಕ್ಷ ಟನ್‌ ಮಾರಾಟವಾಗದೆ ಉಳಿದಿದೆ ಎಂದು ಕರ್ನಾಟಕ ಕಬ್ಬಿಣ ಮತ್ತು ಉಕ್ಕು ತಯಾರಕರ ಸಂಘ (ಕೆಐಎಸ್‌ಎಂಎ) ತಿಳಿಸಿದೆ.

‘ದುಬಾರಿ ಬೆಲೆ ಮತ್ತು ಕಳಪೆ ಗುಣಮಟ್ಟದಿಂದ ಕಬ್ಬಿಣ ಅದಿರು ಮಾರಾಟವಾಗದೆ ಉಳಿದಿದೆ ಎಂದು ಸಂಘದ ಕಾರ್ಯದರ್ಶಿ ರಮಣ ಕುಮಾರ್‌ ಹೇಳಿದ್ದಾರೆ.

ADVERTISEMENT

ಕಬ್ಬಿಣ ಅದಿರಿನ ಮುಕ್ತ ಮಾರಾಟಕ್ಕೆ ಅವಕಾಶ ಮಾಡಿಕೊಡಲು ಮತ್ತು ಸ್ಥಳೀಯ ಅದಿರಿಗೆ ಆದ್ಯತೆ ನೀಡಬೇಕು ಎಂದು ಗಣಿಗಾರಿಕೆ ಅವಲಂಬಿಸಿದವರು ಸುಪ್ರೀಂಕೋರ್ಟ್‌ ನೇಮಿಸಿರುವ ಸಮಿತಿಗೆ ಇತ್ತೀಚಿಗೆ ಮನವಿ ಮಾಡಿಕೊಂಡಿದ್ದರು.

ಸುಪ್ರೀಂಕೋರ್ಟ್‌ ರಾಜ್ಯದಲ್ಲಿ 2011ರಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ನಿಷೇಧಿಸಿತ್ತು. ಆನಂತರ ತನ್ನ ಆದೇಶದಲ್ಲಿ ಮಾರ್ಪಾಡು ಮಾಡಿ, ಉತ್ಪಾದನೆಗೆ ಮಿತಿ ವಿಧಿಸುವುದರ ಜತೆಗೆ ಕೆಲ ನಿಬಂಧನೆಗಳನ್ನು ಹೇರಿತ್ತು.

ಇದರಿಂದ ಸಣ್ಣ ಉದ್ದಿಮೆದಾರರು ಮತ್ತು ಟ್ರಕ್ ಮಾಲೀಕರು ಮತ್ತು ಚಾಲಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಉದ್ಯೋಗ ನಷ್ಟ ಉಂಟಾಗಿ, ಜೀವನ ನಿರ್ವಹಣೆಯೇ ಕಷ್ಟವಾಗಿದೆ ಎಂದು ಕರ್ನಾಟಕ ಗಣಿ ಅವಲಂಬಿತರ ವೇದಿಕೆ (ಕೆಜಿಎವಿ) ಆರೋಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.