ನವದೆಹಲಿ: ‘ಎಲ್ಐಸಿಯ ಷೇರುಗಳನ್ನು ಸಾರ್ವಜನಿಕರ ಖರೀದಿಗೆ ಮುಕ್ತವಾಗಿಸುವಾಗ (ಐಪಿಒ), ಖರೀದಿಗೆ ಮುಕ್ತವಾಗಿಸುವ ಒಟ್ಟು ಷೇರುಗಳಲ್ಲಿ ಗರಿಷ್ಠ ಶೇಕಡ 10ರಷ್ಟನ್ನು ಪಾಲಿಸಿದಾರರಿಗೆ ಮೀಸಲಿಡಲಾಗುವುದು’ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಮಂಗಳವಾರ ತಿಳಿಸಿದ್ದಾರೆ.
ಪಾಲಿಸಿದಾರರ ಹಿತರಕ್ಷಣೆಯ ಉದ್ದೇಶದಿಂದ ಕೇಂದ್ರ ಸರ್ಕಾರವೇ ಗರಿಷ್ಠ ಷೇರುಪಾಲು ಉಳಿಸಿಕೊಳ್ಳಲಿದ್ದು, ಆಡಳಿತಾತ್ಮಕ ನಿಯಂತ್ರಣವನ್ನೂತನ್ನ ಬಳಿಯೇ ಇಟ್ಟುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಹಣಕಾಸು ಮಸೂದೆ 2021-22ರಲ್ಲಿ, ಎಲ್ಐಸಿಯ ಜೀವ ವಿಮಾ ಪಾಲಿಸಿದಾರರಿಗೆ ಐಪಿಒದಲ್ಲಿ ಶೇ 10ರವರೆಗೆ ಷೇರುಗಳನ್ನು ಮೀಸಲಿಡುವ ಪ್ರಸ್ತಾಪ ಇದೆ.
ಏಪ್ರಿಲ್ 1ರಿಂದ ಆರಂಭವಾಗಲಿರುವ ಮುಂದಿನ ಹಣಕಾಸು ವರ್ಷದಲ್ಲಿ ಎಲ್ಐಸಿ ಐಪಿಒ ಬಿಡುಗಡೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಭಾಷಣದಲ್ಲಿ ತಿಳಿಸಿದ್ದರು.
ಎಲ್ಐಸಿ ತಿದ್ದುಪಡಿ ಕಾಯ್ದೆಯನ್ನು ಹಣಕಾಸು ಮಸೂದೆಯ ಭಾಗವನ್ನಾಗಿ ಮಾಡಲಾಗಿದೆ. ಐಪಿಒಗೂ ಮುಂಚಿನ ವಹಿವಾಟಿನ ಸಲಹೆಗಾರರನ್ನಾಗಿ ಡೆಲಾಯ್ಟ್ ಮತ್ತು ಎಸ್ಬಿಐ ಕ್ಯಾಪ್ಸ್ ಕಂಪನಿಗಳನ್ನು ನೇಮಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.