ನವದೆಹಲಿ: ‘ಕೇಂದ್ರ ಸರ್ಕಾರವು ನೆರವಿಗೆ ಧಾವಿಸದಿದ್ದರೆ, ದೇಶದ ಮೂರನೇ ಅತಿದೊಡ್ಡ ಮೊಬೈಲ್ ಸೇವಾ ಸಂಸ್ಥೆಯಾಗಿರುವ ವೊಡಾಫೋನ್ ಐಡಿಯಾ ಬಾಗಿಲು ಹಾಕುವುದು ಅನಿವಾರ್ಯವಾಗಲಿದೆ’ ಎಂದು ಕಂಪನಿ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ ಹೇಳಿದ್ದಾರೆ.
‘ಸರ್ಕಾರದಿಂದ ನಮಗೆ ಹಣಕಾಸು ನೆರವು ಸಿಗದಿದ್ದರೆ ವೊಡಾಫೋನ್ ವಹಿವಾಟು ಸ್ಥಗಿತಗೊಳಿಸಲಾಗುವುದು’ ಎಂದು ಬಿರ್ಲಾ ಅವರು ಇಲ್ಲಿ ನಡೆದ ಸಮಾರಂಭದಲ್ಲಿ ಹೇಳಿದ್ದಾರೆ.
ಬಿರ್ಲಾ ಅವರ ಐಡಿಯಾ ಸೆಲ್ಯುಲರ್ ಮತ್ತು ಬ್ರಿಟನ್ನಿನ ದೂರಸಂಪರ್ಕ ದೈತ್ಯ ಸಂಸ್ಥೆ ವೊಡಾಫೋನ್ನ ಭಾರತದ ಅಂಗಸಂಸ್ಥೆ ಕಳೆದ ವರ್ಷಪರಸ್ಪರ ವಿಲೀನಗೊಂಡಿದ್ದವು. ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೊದ ಉಚಿತ ಕರೆ ಮತ್ತು ತೀರ ಅಗ್ಗದ ಡೇಟಾ ಸೇವೆಗೆ ಸ್ಪರ್ಧೆ ಒಡ್ಡಲು ಈ ವಿಲೀನ ಪ್ರಕ್ರಿಯೆ ನಡೆದಿತ್ತು.
ಕಂಪನಿಯು, ಸೆಪ್ಟೆಂಬರ್ಗೆ ಅಂತ್ಯಗೊಂಡ ದ್ವಿತೀಯ ತ್ರೈಮಾಸಿಕದಲ್ಲಿ ₹ 50,921 ಕೋಟಿಗಳಷ್ಟು ನಷ್ಟ ದಾಖಲಿಸಿದೆ. ದೇಶಿ ಕಾರ್ಪೊರೇಟ್ ಸಂಸ್ಥೆಯೊಂದರ ಅತಿದೊಡ್ಡ ನಷ್ಟದ ಪ್ರಮಾಣ ಇದಾಗಿದೆ.
‘ದೊಡ್ಡ ಮೊತ್ತದ ನಷ್ಟಕ್ಕೆ ಗುರಿಯಾದ ನಂತರ ಹೊಸದಾಗಿ ಹಣ ತೊಡಗಿಸುವುದು ಲಾಭದಾಯಕವಾಗಿರುವುದಿಲ್ಲ. ಹೀಗಾಗಿ ನಾವು ವಹಿವಾಟು ಸ್ಥಗಿತಗೊಳಿಸುತ್ತೇವೆ’ ಎಂದು ಬಿರ್ಲಾ ಹೇಳಿದ್ದಾರೆ.
‘ಕೇವಲ ದೂರಸಂಪರ್ಕ ಕ್ಷೇತ್ರಕ್ಕಷ್ಟೆ ಅಲ್ಲದೆ, ಒಟ್ಟಾರೆ ಆರ್ಥಿಕತೆಯನ್ನು ಶೇ 4.5ರಷ್ಟಕ್ಕೆ ಕುಸಿದಿರುವ ಜಿಡಿಪಿಯಿಂದ ಮೇಲಕ್ಕೆತ್ತಲು ಸರ್ಕಾರ ಪರಿಹಾರ ಕೊಡುಗೆ ಘೋಷಿಸಲಿದೆ’ ಎಂದೂ ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.