ADVERTISEMENT

ಸತತ ಮೂರನೇ ದಿನವೂ ನಕಾರಾತ್ಮಕ ವಹಿವಾಟು

ಪಿಟಿಐ
Published 22 ಡಿಸೆಂಬರ್ 2022, 16:27 IST
Last Updated 22 ಡಿಸೆಂಬರ್ 2022, 16:27 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಚೀನಾದಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವುದು ಹಾಗೂ ಬಡ್ಡಿದರ ಕುರಿತು ಆರ್‌ಬಿಐ ಹೇಳಿಕೆಯು ಷೇರುಪೇಟೆಗಳಲ್ಲಿ ಸತತ ಮೂರನೆಯ ದಿನವೂ ನಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿದವು.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 241 ಅಂಶ ಇಳಿಕೆ ಕಂಡು 60,637 ಅಂಶಗಳಿಗೆ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 72 ಅಂಶ ಇಳಿಕೆಯಾಗಿ 18,127 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ಹಣಕಾಸು ನೀತಿ ಸಮಿತಿಯ (ಎಂಪಿಸಿ) ಸಭೆಯ ಸಾರಾಂಶದ ಪ್ರಕಾರ, ಹಣದುಬ್ಬರದ ವಿರುದ್ಧದ ಹೋರಾಟ ಇನ್ನೂ ಮುಕ್ತಾಯ ಆಗಿಲ್ಲ. ಹೀಗಾಗಿ ಬಡ್ಡಿದರ ಏರಿಕೆಗೆ ಅಲ್ಪ ಮಟ್ಟಿನ ವಿರಾಮ ನಿಡುವುದು ಸರಿಯಾಗುವುದಿಲ್ಲ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಶೇ 0.35ರಷ್ಟು ಬಡ್ಡಿದರ ಹೆಚ್ಚಳದ ಪರ ಮತ ಹಾಕುವಾಗ ಹೇಳಿದ್ದಾರೆ. ಇದು ನಕಾರಾತ್ಮಕ ವಹಿವಾಟಿಗೆ ಕಾರಣವಾಯಿತು ಎಂದು ಜಿಯೋಜಿತ್ ಫೈನಾನ್ಸಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್ ಹೇಳಿದ್ದಾರೆ.

ADVERTISEMENT

ಜಾಗತಿಕ ಷೇರುಪೇಟೆಗಳಿಗೆ ಅನುಗುಣವಾಗಿ ದೇಶದಲ್ಲಿಯೂ ದಿನದ ಆರಂಭದಲ್ಲಿ ಸಕಾರಾತ್ಮಕವಾಗಿ ವಹಿವಾಟು ಇತ್ತು. ಆದರೆ, ಚೀನಾ, ಜಪಾನ್‌, ಕೊರಿಯಾ ಮತ್ತು ಬ್ರೆಜಿಲ್‌ನಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗಿದ್ದರಿಂದ ಹೂಡಿಕೆದಾರರು ಆತಂಕಕ್ಕೆ ಒಳಗಾದರು. ಇದರಿಂದಾಗಿ ವಹಿವಾಟು ಇಳಿಕೆ ಕಂಡಿತು ಎಂದು ಹೆಮ್‌ ಸೆಕ್ಯುರಿಟೀಸ್‌ನ ಮುಖ್ಯಸ್ಥ ಮೋಹಿತ್‌ ನಿಗಮ್‌ ತಿಳಿಸಿದ್ದಾರೆ. ಬ್ರೆಂಟ್‌ ಕಚ್ಚಾ ತೈಲ ಶೇ 0.99ರಷ್ಟು ಹೆಚ್ಚಾಗಿ ಒಂದು ಬ್ಯಾರಲ್‌ಗೆ 83.01 ಡಾಲರ್‌ಗೆ ತಲುಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.