ಮುಂಬೈ: ದೇಶದ ಷೇರುಪೇಟೆಗಳು ಮಂಗಳವಾರದ ವಹಿವಾಟಿನ ಆರಂಭದಲ್ಲಿ ಕಂಡಿದ್ದ ನಷ್ಟದಿಂದ ಹೊರಬಂದು ಸಕಾರಾತ್ಮಕ ಮಟ್ಟದಲ್ಲಿ ವಹಿವಾಟು ಅಂತ್ಯಗೊಂಡಿದೆ.
ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರ ಹಠಾತ್ ರಾಜೀನಾಮೆ ಸುದ್ದಿಯು ಮಂಗಳವಾರ ವಹಿವಾಟಿನ ಆರಂಭದಲ್ಲಿ ಹೂಡಿಕೆ ಚಟುವಟಿಕೆಯನ್ನು ತಗ್ಗಿಸಿತ್ತು. 34,672 ಅಂಶಗಳಲ್ಲಿಮುಂಬೈ ಷೇರುಪೇಟೆ (ಬಿಎಸ್ಇ) ವಹಿವಾಟು ಆರಂಭವಾಯಿತು. ಆ ಬಳಿಕ ಒಂದು ಗಂಟೆಯ ಒಳಗೆ 543 ಅಂಶಗಳಷ್ಟು ಇಳಿಕೆ ಕಂಡಿತ್ತು. ನಂತರ ಚೇತರಿಕೆಯ ಹಾದಿಗೆ ಮರಳಿತು. 190 ಅಂಶಗಳ ಏರಿಕೆಯೊಂದಿಗೆ 35,150 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.
ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) 60 ಅಂಶ ಹೆಚ್ಚಾಗಿ 10,549 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.
ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗಳಿಸಿರುವ ಸ್ಥಾನ ನಿರೀಕ್ಷೆಗಿಂತಲೂ ಉತ್ತಮವಾಗಿದೆ. ಅದರಲ್ಲಿಯೂ ಹಿಂದಿ ಭಾಷೆಯ ಹೃದಯಭಾಗವಾಗಿರುವ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡದಲ್ಲಿ ಹೆಚ್ಚಿನ ಅಂತರದಿಂದ ಬಿಜೆಪಿ ಸೋಲುವ ಅಂದಾಜು ಮಾಡಲಾಗಿತ್ತು. ಆದರೆ, ಹಾಗಾಗಿಲ್ಲ. ಇದು ಷೇರುಪೇಟೆಯ ವಹಿವಾಟಿನಲ್ಲಿ ಚೇತರಿಕೆ ಮೂಡುವಂತೆ ಮಾಡಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.
ರೂಪಾಯಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ 53 ಪೈಸೆ ಇಳಿಕೆಯೊಂದಿಗೆ ಒಂದು ಡಾಲರ್ಗೆ ₹ 71.85ಕ್ಕೆ ತಲುಪಿತು.
ವಹಿವಾಟಿನ ಆರಂಭದಲ್ಲಿ ರೂಪಾಯಿ ಮೌಲ್ಯ 110 ಪೈಸೆಗಳವರೆಗೂ ಇಳಿಕೆಯಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.