ಮುಂಬೈ:ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಕೊರೊನಾ ವೈರಸ್ ಸೋಂಕು ಹರಡುವುದು ತಡೆಯಲು ದೇಶವ್ಯಾಪಿ21 ದಿನಗಳ ಲಾಕ್ಡೌನ್ ಘೋಷಿಸಿದ ಕ್ರಮ, ಷೇರುಪೇಟೆ ಹೂಡಿಕೆದಾರರಲ್ಲಿ ಭರವಸೆ ಮೂಡಿಸಿದೆ.
ಬುಧವಾರದ ವಹಿವಾಟಿನ ದ್ವಿತೀಯಾರ್ಧದಲ್ಲಿ ಬ್ಯಾಂಕಿಂಗ್ ಮತ್ತು ಇಂಧನ ವಲಯದ ಷೇರುಗಳ ಖರೀದಿಗೆ ಆಸಕ್ತಿ ಕಂಡು ಬಂತು. ಒಂದು ಹಂತದಲ್ಲಿಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಸೆನ್ಸೆಕ್ಸ್) 1,861.75ಅಂಶಗಳ ಜಿಗಿತ ಕಂಡು 28,535.78 ಅಂಶದೊಂದಿಗೆ ದಿನವ ವಹಿವಾಟು ಮುಗಿಸಿತು.ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕ ನಿಫ್ಟಿ 516.80 ಅಂಶಗಳ ಏರಿಕೆ ಕಂಡು 8,317.85 ಅಂಶದೊಂದಿಗೆ ವಹಿವಾಟು ಮುಗಿಸಿತು.
ಇಂಧನ ಮತ್ತು ಹಣಕಾಸು ಕ್ಷೇತ್ರದ ಷೇರುಗಳ ಖರೀದಿಗೆ ಹೂಡಿಕೆದಾರರು ಹೆಚ್ಚು ಆಸಕ್ತಿ ತೋರಿಸಿದರು. ಷೇರುಪೇಟೆಯಲ್ಲಿ ಇನ್ನೂ ಸ್ಥಿರತೆ ಬಂದಿಲ್ಲ. ಈ ಹೊಯ್ದಾಟ ಇನ್ನೂ ಕೆಲ ದಿನ ಮುಂದುವರಿಯಲಿದೆ ಎಂದು ತಜ್ಞರು ಹೇಳಿದ್ದಾರೆ.
ಕೊರೊನಾ ವೈರಸ್ ಸೋಂಕು ದೇಶದಲ್ಲಿ ಹರಡುವನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ನಿನ್ನೆಯಷ್ಟೇ 21 ದಿನಗಳ ದೇಶವ್ಯಾಪಿ ಲಾಕ್ಡೌನ್ ಘೋಷಿಸಿದ್ದರು. ಪ್ರಧಾನಿ ಘೋಷಿಸಿದ ಕ್ರಮಗಳು ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಿವೆ.
ದೈತ್ಯ ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಎಚ್ಡಿಎಫ್ಸಿ, ಐಸಿಐಸಿಐ ಮತ್ತು ಕೋಟಕ್ ಬ್ಯಾಂಕ್ಗಳಲ್ಲಿ ದೊಡ್ಡಮಟ್ಟದ ಖರೀದಿ ಚಟುವಟಿಕೆ ಕಂಡು ಬಂತು. ಈ ಕಂಪೆನಿಗ ಷೇರು ಮೌಲ್ಯವೂ ಹೆಚ್ಚಾಯಿತು. ಏಷ್ಯಾದ ಇತರ ಮಾರುಕಟ್ಟೆಗಳಲ್ಲಿಯೂ ಕಂಡು ಬಂದ ಹೂಡಿಕೆದಾರರ ವಿಶ್ವಾಸ ಮುಂಬೈ ಪೇಟೆಯಲ್ಲಿಯೂ ಪ್ರತಿಧ್ವನಿಸಿತು.
ಆಕ್ಸಿಸ್ ಬ್ಯಾಂಕ್ ಶೇ 15ರಷ್ಟು ಏರಿಕೆ ದಾಖಲಿಸಿತು. ಮಾರುತಿ, ಅಲ್ಟ್ರಾಟೆಕ್ ಸಿಮೆಂಟ್, ಬಾರ್ತಿ ಏರ್ಟೆಲ್ ಷೇರುಗಳಿಗೂ ಖರೀದಿದಾರರು ಎಡತಾಕಿದರು. ಆದರೆ ಐಟಿಸಿ, ಒಎನ್ಜಿಸಿ ಮತ್ತು ಎಲ್ಅಂಡ್ಟಿ ಷೇರು ಬೆಲೆ ಕುಸಿಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.